ಶಿಗ್ಗಾವಿ: ಆರೋಗ್ಯಕರ ವಾತಾವರಣಕ್ಕೆ ಅನುಕೂಲವಾಗಲು ನಗರ, ಪಟ್ಟಣಗಳಲ್ಲಿ ಉದ್ಯಾನಗಳನ್ನು ತೆರೆಯುತ್ತಾರೆ. ಆದರೆ, ಕೆಲವೆಡೆ ನಿರ್ವಹಣೆ ಮಾಡುವುದಿಲ್ಲ. ಈಗ ಇದೇ ಪರಿಸ್ಥಿತಿ ಬಂಕಾಪುರ ಪಟ್ಟಣದ ಉದ್ಯಾನಕ್ಕಿದ್ದು, ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿ ಹೋಗಿದೆ.
30 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬಂಕಾಪುರ ಪಟ್ಟಣದಲ್ಲಿ ಜನರ ವಾಯುವಿಹಾರಕ್ಕೆ ಸರಿಯಾದ ಉದ್ಯಾನಗಳಿಲ್ಲ. ಇರುವ ಉದ್ಯಾನಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನವು ನಿರ್ವಹಣೆ ಕೊರತೆಯಿಂದ ಹಾಳು ಕೊಂಪೆಯಂತಾಗಿದೆ. ಕಸ, ಮುಳ್ಳಿನ ಗಿಡಗಂಟಿಗಳು ಬೆಳೆದುಕೊಂಡಿವೆ. ಉದ್ಯಾನದಲ್ಲಿನ ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗಿವೆ. ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ.
ಉದ್ಯಾನದಲ್ಲಿ ಕಸ ಬೆಳೆದಿರುವುದರಿಂದ ವಿಷಜಂತುಗಳ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ಭಯದಿಂದ ಹಾಗೂ ಇಲ್ಲಿ ಮೂಲ ಸೌಕರ್ಯಗಳ ಅಭಾವದಿಂದ ಇಲ್ಲಿಗೆ ಬರಲು ಬಹುತೇಕ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಚಂದ್ರಗೌಡ ಕರೆಗೌಡ್ರ.
ಪಟ್ಟಣದಲ್ಲಿ ವಯೋವೃದ್ಧರು ವಿಶ್ರಾಂತಿ ಪಡೆಯಲುಮ ವಾಯುವಿಹಾರಕ್ಕೆ ಉತ್ತಮವಾದ ಸ್ಥಳಗಳಿಲ್ಲ. ಹೀಗಾಗಿ ಜನರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿಯೇ ವಾಯುವಿಹಾರ ಮಾಡುವಂತಾಗಿದೆ. ಈ ಕುರಿತು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಲಿಖಿತವಾಗಿ, ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.