ಅಕ್ಕಿಆಲೂರ: ಹಾನಗಲ್ ತಾಲ್ಲೂಕಿನ ವರ್ದಿ ಗ್ರಾಮದ ಹೊಳೆದಂಡೆ ಪ್ರದೇಶದಲ್ಲಿ ವರದಾ ನದಿ ಪ್ರವಾಹಕ್ಕೆ ತುತ್ತಾಗುವ ನಿವಾಸಿಗಳನ್ನು ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದ ಸರ್ವೆ ನಂ. 35 ಮತ್ತು 45ರಲ್ಲಿ ನಿರ್ಮಾಣಗೊಂಡಿರುವ 18 ಮನೆಗಳಿಗೆ ಪ್ರತಿವರ್ಷ ಮಳೆಗಾಲದಲ್ಲಿ ನೀರು ನುಗ್ಗುತ್ತಿದೆ. ಹೆಚ್ಚು ಮಳೆ ಸುರಿದರೆ ಸಾಕು ಸಮಸ್ಯೆ ಅನುಭವಿಸುತ್ತಿದ್ದೇವೆ. ಸೂಕ್ತ ಪರಿಹಾರವೂ ನಮಗೆ ಸಿಗುತ್ತಿಲ್ಲ. ಈ ಪ್ರದೇಶದಲ್ಲಿ ಬಡವರೇ ವಾಸಿಸುತ್ತಿದ್ದು, ತೀವ್ರ ಆತಂಕಕ್ಕೀಡಾಗಿದ್ದಾರೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
‘ಈ ಪ್ರದೇಶ ವರದಾ ನದಿ ದಡದಲ್ಲಿರುವುದರಿಂದ ಸಮಸ್ಯೆ ಸಹಜ. ಪ್ರತಿವರ್ಷ ಬರುವುದು, ಪರಿಸ್ಥಿತಿ ವೀಕ್ಷಿಸಿ ಸಮಸ್ಯೆ ಆಲಿಸುವುದು, ಪರಿಹಾರದ ಭರವಸೆ ನೀಡುವುದರಲ್ಲಿ ಅರ್ಥವಿಲ್ಲ. ಸರ್ಕಾರಿ ಜಮೀನು ಇದ್ದರೆ, ಇಲ್ಲವೇ ಖಾಸಗಿಯವರನ್ನು ಜಮೀನು ನೀಡುವಂತೆ ಮನವೊಲಿಸಿದರೆ ತಕ್ಷಣವೇ ಅಲ್ಲಿಗೆ ಸ್ಥಳಾಂತರಿಸೋಣ. ಆದ್ಯತೆಯ ಮೇರೆಗೆ ವಸತಿ ಯೋಜನೆಯ ಅಡಿ ಮನೆಗಳನ್ನು ನಿರ್ಮಿಸಿಕೊಡಲು ಪ್ರಯತ್ನಿಸೋಣ. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ನೂರಕ್ಕೆ ನೂರು ಎಲ್ಲವನ್ನೂ ಸರ್ಕಾರವೇ ಮಾಡುವುದು ಕಷ್ಟಸಾಧ್ಯ. ಈ ವಿಷಯದಲ್ಲಿ ಪ್ರತಿಯೊಬ್ಬರೂ ಸ್ಪಂದಿಸಬೇಕಿದೆ. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರನ್ನು ಒಳಗೊಂಡಂತೆ ನಿವಾಸಿಗಳ ಸಭೆ ಕರೆದು ಸುದೀರ್ಘವಾಗಿ ಚರ್ಚಿಸಿ, ನಿರ್ಣಯಕ್ಕೆ ಬನ್ನಿ. ಸಭೆಯ ನಡಾವಳಿ ಅಂಗೀಕರಿಸಿ. ಅನಗತ್ಯ ವಿಳಂಬ, ಅಸಹಕಾರ ಬೇಡ’ ಎಂದು ಮನವಿ ಮಾಡಿದರು.
ತಹಶೀಲ್ದಾರ್ ರವಿ ಕೊರವರ, ಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ ಬೂದಿಹಾಳ, ಹಜರತ್ಅಲಿ ಎತ್ತಿನಮನಿ, ಬಸವರಾಜ ಬಾರ್ಕಿ, ರೇವಣಪ್ಪ ಬಾರ್ಕಿ, ನಿವೃತ್ತ ಡಿವೈಎಸ್ಪಿ ಸಿ.ಬಿ.ಪಾಟೀಲ, ಮುಖಂಡರಾದ ಕಲವೀರಪ್ಪ ಪವಾಡಿ, ಮಹಾಬಳೇಶ್ವರ ಸವಣೂರ, ಸುಲೇಮಾನ್ ಮುಲ್ಲಾ, ರಜಾಕ್ ನರೇಗಲ್, ಖಾಸೀಂಸಾಬ ತಂಡೂರ, ಗೌಸಬಾಷಾ ಮನ್ಸೂರ್, ಸುರೇಶ ಮಾಚಾಪೂರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನಕುಮಾರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.