ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಬಿಐ ಹೆಸರಿನಲ್ಲಿ ವೈದ್ಯಗೆ ₹3.71 ಕೋಟಿ ವಂಚನೆ

Published 22 ಮೇ 2024, 5:25 IST
Last Updated 22 ಮೇ 2024, 5:25 IST
ಅಕ್ಷರ ಗಾತ್ರ

ಹಾವೇರಿ: ಸಿಬಿಐ ಪೊಲೀಸರು ಎಂದು ಹೇಳಿಕೊಂಡು ಖಾತೆಯ ಹಣ ಪರಿಶೀಲಿಸುವ ನೆಪದಲ್ಲಿ ರಾಣೆಬೆನ್ನೂರು ನಗರದ ಹಿರಿಯ ವೈದ್ಯರೊಬ್ಬರ ಖಾತೆಯಿಂದ ಬರೋಬ್ಬರಿ ₹3.71 ಕೋಟಿ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.

ರಾಣೆಬೆನ್ನೂರು ನಗರದ ಸ್ಟೇಷನ್ ರಸ್ತೆಯ ಸಂಜೀವಿನಿ ನರ್ಸಿಂಗ್ ಹೋಮ್‌ನ ಡಾ.ಭೀಮಸೇನ ಶ್ರೀನಿವಾಸ ಕರ್ಜಗಿ (83) ವಂಚನೆಗೆ ಒಳಗಾದವರು.

ವೈದ್ಯರಿಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಮಾಡಿ ‘ನಾವು ಸಿಬಿಐ ಮುಂಬೈ ಇನ್‌ಸ್ಪೆಕ್ಟರ್‌ ದಿಕ್ಷಿತ್ ಗಡಾದ ಅಂತಾ ಮಾತನಾಡುತ್ತಿದ್ದೇನೆ. ನರೇಶ ಗೋಯಲ್ ಎನ್ನುವ ವ್ಯಕ್ತಿ ಮುಂಬೈ ವ್ಯಕ್ತಿಯೊಬ್ಬನ ಮೇಲೆ ಬ್ಯಾಂಕ್ ಚೀಟಿಂಗ್ ಮತ್ತು ಮನಿ ಲ್ಯಾಂಡರ್ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾನೆ. ಅವನು ಮುಂಬೈನ ಕೆನರಾ ಬ್ಯಾಂಕ್‌ನ ಭೀಮಸೇನ ಕರ್ಜಗಿ ಹೆಸರಿನಿಂದ ಹಣ ತೆಗೆದಿದ್ದಾನೆ. ನೀವು ಯಾವಾಗ ಇಲ್ಲಿ ಖಾತೆ ತೆಗೆದಿದ್ದೀರಿ ಹೇಳಿ’ ಎಂದು ಡಾ.ಭೀಮಸೇನ ಅವರಿಗೆ ಬೆದರಿಸಿದ್ದಾನೆ.

ಅಲ್ಲದೆ ಅವರ 10 ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾನೆ. ನಂತರ ಖಾತೆಗಳ ವೆರಿಫಿಕೇಷನ್ ಮಾಡಬೇಕು ಎಂದು ಹೇಳಿ ಎಲ್ಲ ಖಾತೆಯಿಂದ ಒಟ್ಟು ₹3.71 ಕೋಟಿ ಹಣವನ್ನು ಆರ್‌ಟಿಜಿಎಸ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಹಾವೇರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಕ್ಕೆ ಬಾರದೇ ಬ್ಯಾಂಕ್ ಖಾತೆಯಿಂದ ₹49 ಸಾವಿರ ಡ್ರಾ

ಹಿರೇಕೆರೂರು: ತಾಲ್ಲೂಕಿನ ಯಮ್ಮಿಗನೂರು ಗ್ರಾಮದ ಯುವರಾಜ ಎನ್. ಚಿಕ್ಕಬಾಸೂರು ಎಂಬುವರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದೇ ಒಟ್ಟು ₹49,999 ಸಾವಿರ ಡ್ರಾ ಮಾಡಿಕೊಳ್ಳಲಾಗಿದೆ.

ಚಿಕ್ಕೇರೂರು ಗ್ರಾಮದ ಕೇನರಾ ಬ್ಯಾಂಕ್‌ನ ಅವರ ಉಳಿತಾಯ ಖಾತೆಯಿಂದ ಮೇ 10 ರಂದು ರಾತ್ರಿ 10.40ಕ್ಕೆ ₹25 ಸಾವಿರ ಹಾಗೂ 10:49ಕ್ಕೆ ₹24,999 ಸಾವಿರ ಗಮನಕ್ಕೆ ಬಾರದೆ ಬ್ಯಾಂಕ್‌ ಖಾತೆಯಿಂದ ಎರಡು ಬಾರಿ ಹಣ ಡ್ರಾ ಮಾಡಲಾಗಿದೆ. ಮೇ 10 ರಂದು ರೈತ ಯುವರಾಜ ಅವರ ಮೊಬೈಲ್‌ಗೆ 49,999 ಸಾವಿರ ಹಣ ಡ್ರಾ ಆಗಿರುವ ಬಗ್ಗೆ ಮೇಸೆಜ್ ಬಂದಿದೆ.

ಇದನ್ನು ನೋಡಿ ಗಾಬರಿಯಿಂದ ಯುವರಾಜ ಅವರು ತಾವು ಖಾತೆ ಹೊಂದಿರುವ ಚಿಕ್ಕೇರೂರು ಗ್ರಾಮದ ಕೆನರಾ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಹಣ ಡ್ರಾ ಆಗಿರುವ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಮೇ 13 ರಂದು ಹಾವೇರಿ ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೀಜ,ಗೊಬ್ಬರಕ್ಕೆ ಅಂತ ಹಣವನ್ನು ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಇಟ್ಟುಕೊಂಡಿದೆ. ಆದರೆ ನನಗೆ ಗೋತ್ತಿಲ್ಲದೆ ನನ್ನ ಖಾತೆಯಿಂದ ಇಷ್ಟೊಂದು ಹಣ ಡ್ರಾ ಆಗಿದೆ. ಇದಕ್ಕೆ ಹೊಣೆ ಯಾರು?’ ಎಂದು ರೈತ ಯುವರಾಜ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT