ಹಾವೇರಿ:ಕವಿ ಕೆ.ಎಸ್. ನಿಸಾರ್ ಅಹಮದ್ ಇನ್ನು ನಾಡಿಗೆ ಮಾತ್ರವಲ್ಲ, ಏಲಕ್ಕಿ ಕಂಪಿನ ನಗರಿ ಹಾವೇರಿಯ ಸಾಂಸ್ಕೃತಿಕ ಲೋಕಕ್ಕೂ ನೆನಪಾಗಿ ಉಳಿದರು ಎಂದು ಹಾವನೂರು ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷ ಹಾವನೂರ ಹೇಳಿದರು.
ಹಾವನೂರು ಪ್ರತಿಷ್ಠಾನ 1994ರಿಂದ 2004ರವರೆಗೆ ಕಾದಂಬರಿ ಪ್ರಕಾರಕ್ಕೆ ಪ್ರಶಸ್ತಿಯನ್ನು ನೀಡುತ್ತಿತ್ತು. ಒಂದು ಸಂದರ್ಭದಲ್ಲಿ ಕವಿ ಕೆ.ಎಸ್ ನಿಸಾರ್ ಅಹಮದ್ ಅವರನ್ನು ಪ್ರಶಸ್ತಿ ವಿತರಣೆಗಾಗಿ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿ ಆಮಂತ್ರಿಸಿದ್ದೆವು. ನಿಸಾರ್ ಒಪ್ಪಿಗೆ ಕೂಡ ಸೂಚಿಸಿದ್ದರು. ಅನಿರೀಕ್ಷಿತವಾಗಿ ಹೃದಯ ಶಸ್ತ್ರಚಿಕಿತ್ಸೆ ಸಂಬಂಧವಾಗಿ ಆಸ್ಪತ್ರೆಗೆ ದಾಖಲಾದರು. ಹೀಗಾಗಿ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತೆ ನಿಸಾರ್ ಅವರು ಹಾವೇರಿಗೆ ಬರುವ ಸಂದರ್ಭ ತಪ್ಪಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಬನಶಂಕರಿ ನಗರದ 2ನೇ ಹಂತದಲ್ಲಿರುವ ಹಮೀದ್ ಹೈದರ್ ಹೆಸರಿನ ಅವರ ನಿವಾಸಕ್ಕೆ ಹೋದಾಗ ಅವರು ಕೊಟ್ಟ ಆತಿಥ್ಯ ಸ್ಮರಣೀಯವಾದುದು. ವಿ.ಕೃ.ಗೋಕಾಕ, ಚಂಪಾ, ಸಿದ್ಧಲಿಂಗ ಪಟ್ಟಣಶೆಟ್ಟಿ, ಗಳಗನಾಥರು ಮುಂತಾದವರ ನೆಲದವರೆಂದು ತಿಳಿದು ಪುಳಕಿತರಾಗಿದ್ದರು ಎಂದು ಹೇಳಿದರು.
ಕವಿ ಸತೀಶ ಕುಲಕರ್ಣಿ, ಎಸ್.ಆರ್. ಹಿರೇಮಠ, ಶಿವಯೋಗಿ ಚರಂತಿಮಠ ಹಾಗೂ ಶಿವಯೋಗಿ ಸಣ್ಣಂಗಿ ಜೊತೆಗಿದ್ದರು ಎಂದು ವಿರುಪಾಕ್ಷ ಹಾವನೂರ ಸ್ಮರಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.