ಹಾವೇರಿ: ಗ್ರಾಹಕರ ಹೆಸರಿಗೆ ಟ್ರ್ಯಾಕ್ಟರ್ ವರ್ಗಾಯಿಸಲು ಮತ್ತು ವಾಹನದ ಚಾಲ್ತಿ ಅವಧಿಯಲ್ಲಿರುವ ವಿಮಾ ಪಾಲಿಸಿ ನೀಡಲು ಓಂಕಾರ ಟ್ರ್ಯಾಕ್ಟರ್ಸ್ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಬ್ಯಾಡಗಿ ತಾಲ್ಲೂಕು ಧೂಳಿಕೊಪ್ಪದ ಬಸವರಾಜ ಚನ್ನಪ್ಪ ಬಣಕಾರ ಅವರ ಮಗ ಆದರ್ಶ ಬಣಕಾರ ಅವರು ರಾಣೆಬೆನ್ನೂರು ಓಂಕಾರ ಟ್ರ್ಯಾಕ್ಟರ್ಸ್ ಷೋರೂಂನಲ್ಲಿ 2021ರ ಡಿಸೆಂಬರ್ 2 ಸೋಲಿಸ್ ಟ್ರ್ಯಾಕ್ಟರ್ ಖರೀದಿಸಿದ್ದರು. ಟ್ರ್ಯಾಕ್ಟರ್ನ ದೊಡ್ಡ ಗಾಲಿಯ ಒಂದು ಟೈರ್ ಒಡೆದು ಹಾಳಾಗಿತ್ತು. ಷೋರೂಂ ಅವರು ಟ್ರ್ಯಾಕ್ಟರ್ ಟೈರು ಬದಲಾಯಿಸದ ಹಿನ್ನೆಲೆ ಹಾಗೂ ವಾಹನ ನೋಂದಣಿ ಮಾಡಿಸದ ಹಾಗೂ ಆರ್.ಸಿ. ಪುಸ್ತಕ ನೀಡದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಹಾಗೂ ಸದಸ್ಯೆ ಉಮಾದೇವಿ ಎಸ್.ಹಿರೇಮಠ ನೇತೃತ್ವದ ತಂಡ, ವಿಶ್ವಾಸಾರ್ಹ ಪ್ರಮಾಣಪತ್ರ ಪಡೆದ 40 ದಿನದೊಳಗಾಗಿ ಯಾವುದೇ ಶುಲ್ಕ ಪಡೆಯದೇ ಟ್ರ್ಯಾಕ್ಟರ್ ಅನ್ನು ಬಸವರಾಜ ಚನ್ನಪ್ಪ ಬಣಕಾರ ಅಥವಾ ಅವರ ಮಗ ಆದರ್ಶ ಬಣಕಾರ ಅವರ ಹೆಸರಿಗೆ ನೋಂದಾಯಿಸಿ ನೊಂದಣಿ ಪ್ರಮಾಣಪತ್ರ ಹಾಗೂ ವಾಹನದ ಚಾಲ್ತಿಯ ಅವಧಿಯಲ್ಲಿರುವ ವಿಮಾ ಪಾಲಿಸಿ ನೀಡಬೇಕು. ಸೇವಾ ನ್ಯೂನತೆಗಾಗಿ ₹10 ಸಾವಿರ ದಂಡ ನೀಡುವಂತೆ ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.