ಕುಮಾರಪಟ್ಟಣ: ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಕೊರೊನಾ ಸೋಂಕು ನಿವಾರಣೆಗಾಗಿ ಏಕನಾಥೇಶ್ವರಿ, ದುರ್ಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕೊರೊನಮ್ಮದೇವಿ ಹೆಸರಿನಲ್ಲಿ ಅಭಿಷೇಕ, ಹೋಮ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿತು.
ಎರಡು ವರ್ಷಗಳಿಂದ ಜನರ ಪ್ರಾಣವನ್ನು ಹಿಂಡುತ್ತಿರುವ ಕೊರೊನಾ ಸೋಂಕು ತೊಲಗಿಸಲು ದೇವರುಗಳಿಗೆ ಶಾಂತಿ ಮಾಡಲಾಗಿದೆ. ಗೊರವಯ್ಯ ಹಾಗೂ ಜೋಗತಿಯರನ್ನು ಕರೆಸಿ ಪಡ್ಡಲಿಗೆ ತುಂಬಿಸಲಾಯಿತು ಎಂದು ಕೆಲ ಗ್ರಾಮಸ್ಥರು ತಿಳಿಸಿದರು.
ಗ್ರಾಮಸ್ಥರೆಲ್ಲಾ ಕೂಡಿ ಮನೆ ಮನೆಗೆ ಪಟ್ಟಿ ಹಾಕಿ ಸಂಗ್ರಹಿಸಿದ ಹಣದಲ್ಲಿ ಗ್ರಾಮದ ಎಲ್ಲ ಗಂಡು ಮತ್ತು ಹೆಣ್ಣು ದೇವತೆಗಳಿಗೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಲಾಯಿತು ಎಂದರು. ಕಾರ್ಯಕ್ರಮ ಮುಗಿದ ಬಳಿಕ ಬಂದಂತಹ ಜನರಿಗೆ ಪ್ರಸಾದ ವಿತರಿಸಲಾಗಿದೆ.
ಅಧಿಕ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕೆಲವರು ಮಾಸ್ಕ್ ಧರಿಸದೆ ದೈಹಿಕ ಅಂತರ ಮರೆತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.