ರಾಣೆಬೆನ್ನೂರು: ಆರೇಮಲ್ಲಾಪುರ ಗ್ರಾಮದ ಪಿಡಿಒ ಅವರನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲದಿದ್ದರೆ ಜು.21ರಂದು ಶರಣಬಸವೇಶ್ವರ ಮಠದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದ ಗ್ರಾ.ಪಂ. ಸದಸ್ಯ ಹಾಗೂ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಒ ಡಿ.ಬಿ.ಹರಿಜನ ಅವರು 2015ರಿಂದ ಆರೇಮಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಅನೇಕ ಹಗರಣಗಳು ನಡೆದಿವೆ. ಈ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಹಣ ದುರುಪಯೋಗವಾಗಿದೆ. ಬಡ ಸಾಮಾನ್ಯರಿಗೆ ತಲುಪಬೇಕಾದಂತಹ ಯೋಜನೆಗಳು ಸರಿಯಾಗಿ ತಲುಪಿಲ್ಲ. ಜಾನುವಾರು ಮತ್ತು ಕುರಿಗಳ ಕೊಟ್ಟಿಗೆ ಕಟ್ಟಡಕ್ಕೂ ಸಹ ಫಲಾನುಭವಿಗಳಿಂದ ಹಣ ವಸೂಲಿ ಮಾಡಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಲೋಕಾಯುಕ್ತಕ್ಕೂ ಕೂಡ ದೂರು ದಾಖಲಿಸಿದ್ದೇನೆ ಎಂದು ದೂರಿದರು.
ಇಂತಹ ಅಧಿಕಾರಿಗಳಿದ್ದರೆ ಗ್ರಾಮವು ಅಬಿವೃದ್ಧಿಯಾಗಲು ಸಾಧ್ಯವಿಲ್ಲ ಕೂಡಲೇ ಇವರನ್ನು ಜು. 20ರೊಳಗೆ ವರ್ಗಾವಣೆ ಮಾಡಿ ವಜಾಗೊಳಿಸಬೇಕು. ಇಲ್ಲವಾದಲ್ಲಿ ಜು.21 ರಂದು ಆಮರಣಾಂತರ ಉಪವಾಸ ಸತ್ಯಾಗ್ರಹವನ್ನು ಗ್ರಾಮದ ಕೈಗೊಳ್ಳುವುದಾಗಿ ಶ್ರೀಗಳು ತಿಳಿಸಿದರು.
ಯಲ್ಲಪ್ಪ ಸೂರ್ವೆ, ಶಿವಣ್ಣ ಸಣ್ಣಬೊಮ್ಮಾಜಿ, ಮಂಜುನಾಥ ವಡ್ಡರ, ದೊಡ್ಡವೀರಪ್ಪ ಚಿನಗುಡಿ, ನಾಗರಾಜ ನಾಗರಜ್ಜಿ, ಶಶಿಧರ ಮಠದ ಇದ್ದರು.