ಹಾವೇರಿ:‘ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಬದುಕುವ ರೀತಿ ಹಿಂದುತ್ವವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕರ ಪ್ರಾಂತ ಕಾರ್ಯವಾಹಕ ರಾಘವೇಂದ್ರ ಕಾಗವಾಡ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ವಿಜಯ ಸಂಗಮ ನಿಮಿತ್ತ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಷ್ಟ್ರೀಯ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು’ ಎಂದರು.
ಸಮಾಜವನ್ನು ಸುಧಾರಿಸುವ ಕೆಲಸವನ್ನು ಪೂರ್ವಜರು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ಅದನ್ನೇ ಸ್ವಯಂ ಸೇವಕರು ಮುಂದುವರಿಸುತ್ತಿದ್ದಾರೆ. ಇದರಲ್ಲಿ ಹೊಸ ಕೆಲಸ ಯಾವುದೂ ಇಲ್ಲ ಎಂದರು.
ಒಟ್ಟು ಸಮಾಜದ ಸಂಘಟನೆ ಮಾಡುವುದು ಸ್ವಯಂ ಸೇವಾ ಸಂಘದ ಮುಖ್ಯ ಉದ್ದೇಶ. ಹಿಂದೂ ಸಮಾಜದ ಸಂಘಟನೆ ಮಾಡುವುದರಿಂದ ಸಮಸ್ಯೆಯ ಪರಿಹಾರವನ್ನು ಕಾಣಬಹುದಾಗಿದೆ. ಧರ್ಮ ಎಂಬುದು ಪೂಜಾ ಪದ್ಧತಿಗೆ ಸಂಬಂಧವಿಲ್ಲ, ಇದು ಜೀವನಕ್ಕೆ ಸಂಬಂಧಿಸಿದ್ದಾಗಿದೆ ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ‘ಸ್ವಯಂ ಸೇವಕರು ಸಂಸ್ಕೃತಿಯ ಭಾಗವಾಗಬೇಕು. ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳಬೇಕು’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನೂರಾರು ಸ್ವಯಂ ಸೇವಕರಿಂದ ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಆರ್ಎಸ್ಎಸ್ ಜಿಲ್ಲಾ ಸಂಚಾಲಕ ಈಶ್ವರ ಹಾವನೂರ, ಶಾಸಕ ನೆಹರು ಓಲೇಕಾರ ಇದ್ದರು.