ಕುಮಾರಪಟ್ಟಣ | ಕರಾಳ ದಿನ ನಿವಾರಣೆಗೆ ಪ್ರಾರ್ಥನೆ

ಕುಮಾರಪಟ್ಟಣ: ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿರುವ ಕೊರೊನಾ ವೈರಸ್ ಶ್ರೀರಾಮನವಮಿ, ಗುಡ್ ಫ್ರೈಡೆ, ಬಸವ ಜಯಂತಿ... ಹೀಗೆ ಸಾಲು ಸಾಲು ಹಬ್ಬಗಳು ಸೇರಿದಂತೆ ಮುಸಲ್ಮಾನ ಬಂಧುಗಳ ಪವಿತ್ರ ಈದ್ ಉಲ್ ಫಿತ್ರ್ (ರಂಜಾನ್) ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ.
ಸರ್ಕಾರ ಕೋವಿಡ್ ಹರಡುವಿಕೆಯನ್ನು ತಡೆಯಲು ಲಾಕ್ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಮಸೀದಿಯಿಂದ ದೂರ ಉಳಿದು ಎಲ್ಲರು ಮನೆಯಲ್ಲಿ ಕುಟುಂಬಸ್ಥರೊಂದಿಗೆ ನಮಾಜ್, ಕುರಾನ್ ಓದುವ ಮೂಲಕ ಸೋಂಕಿನಿಂದ ವಿಶ್ವಕ್ಕೆ ಮುಕ್ತಿ ದೊರೆಯಲೆಂದು ಪೈಗಂಬರರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ದೇಶದ ಕಾನೂನನ್ನು ಗೌರವಿಸಿ, ಪಾಲಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ ಎಂದು ಜಿಕ್ರಿಯಾಸಾಬ್ ಶೇಖಸನದಿ ಹಾಗೂ ಇಕ್ಬಾಲ್ ಘನಿಸಾಬ್ ತೆಪ್ಪದ ಹೇಳುತ್ತಾರೆ.
ಮಹಮದ್ ಪೈಗಂಬರರ ಸಂದೇಶದಂತೆ ಜಮಾತ್ಗೆ ವಿರುದ್ಧವಾಗಿ ನಮಾಜ್ ಮಾಡುವಂತಿಲ್ಲ. ಲಾಕ್ಡೌನ್ ಹೇರಿಕೆಯಿಂದ ನಿರಾಸೆ ಆಗಿರುವುದು ನಿಜ. ಆದರೆ, ಸಂಕಷ್ಟ ಪರಿಸ್ಥಿತಿಯಲ್ಲಿ ಮನುಕುಲದ ಉಳಿವಿಗಾಗಿ ಆಸೆಗಳನ್ನು ತ್ಯಾಗ ಮಾಡಲಾಗಿದೆ. ಕರಾಳ ದಿನಗಳು ದೂರವಾಗಲೆಂದು ಒಂದೇ ಜಾಗದಲ್ಲಿ (ಮಸೀದಿ) 30 ದಿನ ಭಗವಂತನಲ್ಲಿ ವಿಶೇಷ ಜಪ-ತಪ ಕೈಗೊಳ್ಳಲಾಗಿದೆ. ಈ ಬಾರಿ ಆಚರಣೆ ಸರಳವಾಗಿರಲಿ ಎಂಬುದಷ್ಟೇ ನಮ್ಮೆಲ್ಲರ ಆಶಯ ಎಂದು ಇಸ್ಲಾಂ ಧರ್ಮಗುರು ಮೌಲಾನಾ ಇಬ್ರಾಹಿಂ ಸಾಬ್ ಸಂದೇಶ ನೀಡುತ್ತಾರೆ.
‘ಸರ್ಕಾರದ ಜೊತೆಗೆ ಕೈಜೋಡಿಸುವಂತೆ ಅರಿವು ಮೂಡಿಸಲಾಗಿದೆ. ರಂಜಾನ್ ಬಳಿಕವೂ ಮಕ್ಕಳಿಂದ ಕುರಾನ್ ಓದು ಹಾಗೂ ಹಿರಿಯರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಚಿಂತನೆಯಿದೆ’ ಎಂದು ಧರ್ಮಗುರು ಮೌಲಾನಾ ಸನಾವುಲ್ಲಾ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.