ರಾಣೆಬೆನ್ನೂರು: ಇಲ್ಲಿನ ಕುರುಬಗೇರಿಯ ದೇವಮರಿಯಪ್ಪ ಅವರ ‘ರಾಣೆಬೆನ್ನೂರು ಹುಲಿ’ ಎಂಬ ಹೋರಿ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇರಿದಂತೆ ಹೊರ ರಾಜ್ಯದಲ್ಲಿ ನಡೆದ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಇದು ಭಾಗವಹಿಸಿತ್ತು.
ಹೋರಿ ಸ್ಪರ್ಧೆಗೆ ಭಾಗವಹಿಸಿದಲ್ಲೆಲ್ಲ ಅಭಿಮಾನಿಗಳನ್ನು ಸಂಪಾದಿಸಿತ್ತು. ದೇವಮರಿಯಪ್ಪ ಹಾಗೂ ಕುಟುಂಬದವರು ಹೋರಿಯನ್ನು ಕಳೆದುಕೊಂಡು ದುಃಖ ವ್ಯಕ್ತಪಡಿಸಿದರು.
ಹೋರಿ ಸಾವಿಗೀಡಾದ ಸುದ್ದಿ ತಿಳಿಯುತ್ತಲೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದರು.
17 ವರ್ಷದಿಂದ ವಿವಿಧ ಕಡೆ ನಡೆದ ಸ್ಪರ್ಧೆಗಳಲ್ಲಿ ಹೋರಿ ಇದುವರೆಗೆ 25 ಗ್ರಾಂ ಬಂಗಾರ, ಬೈಕ್, 2 ಕೆ.ಜಿ. ಬೆಳ್ಳಿ, 6 ಎತ್ತಿನ ಬಂಡಿ, ನೂರಾರು ಫ್ರಿಡ್ಜ್, ಗಾಡ್ರೆಜ್ ಕಪಾಟು, ಸೈಕಲ್ಗಳನ್ನು ಬಹುಮಾನವಾಗಿ ಗಳಿಸಿತ್ತು.
ಶಾಸಕ ಅರುಣಕುಮಾರ ಪೂಜಾರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ರೈತರು, ಅಭಿಮಾನಿಗಳು ಹೋರಿಯ ಅಂತಿಮ ದರ್ಶನ ಪಡೆದರು.
‘ನಗರದಲ್ಲಿ ಸಕಲವಾದ್ಯಗಳೊಂದಿಗೆ ಹೋರಿಯ ಮೆರವಣಿಗೆ ಮಾಡಲಾಗುತ್ತದೆ. ನಂತರ ಪೂಜೆ, ವಿಧಿ ವಿಧಾನಗಳ ಮೂಲಕ ಹೊಲದಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಗುವುದು’ ಎಂದು ನಗರಸಭೆ ಸದಸ್ಯ ಪ್ರಕಾಶ ಬುರಡೀಕಟ್ಟಿ ತಿಳಿಸಿದರು.