ಹಾವೇರಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಶಾಸಕ ನೆಹರು ಓಲೇಕಾರ ಅವರಿಗೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ. ಹನುಮಂತಪ್ಪ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಭಾನುವಾರ ಮನವಿ ಪತ್ರ ಸಲ್ಲಿಸಲಾಯಿತು.
2006 ಏಪ್ರಿಲ್ ಪೂರ್ವದಲ್ಲಿನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಮತ್ತು 2006ರ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ಇರುವುದಿಲ್ಲ. ಬೇರೆ ರಾಜ್ಯಗಳು ಈಗಲೂ ವೇತನದ ಜೊತೆಗೆ ಪಿಂಚಣಿಯನ್ನೂ ನೀಡುತ್ತಿವೆ. 6ನೇ ವೇತನ ಆಯೋಗವು ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬರಿಗೈಯಲ್ಲಿ ನಿವೃತ್ತರಾದ ನೌಕರರಿಗೆ ಅವರ ಹಿಂದಿನ ಸೇವೆ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು (ಓ.ಪಿ.ಎಸ್) ಮತ್ತು ಉಳಿದ ನೌಕರರಿಗೆ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯವನ್ನು ಒದಗಿಸಿಕೊಡಲು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.
ಸಂಘದ ರಾಜ್ಯ ಖಜಾಂಚಿ ಬಸಪ್ಪ ಜಿ. ಕೊರಗ, ರಾಜ್ಯ ಸಹ ಸಂಚಾಲಕ ಎಂ.ಎಸ್ ಭತ್ತದ, ಜಿಲ್ಲಾ ಗೌರವಾಧ್ಯಕ್ಷ ಎಫ್.ಎಚ್. ಕೊರವರ ಹಾಗೂ ನಿವೃತ್ತ ಪಿಂಚಣಿ ವಂಚಿತ ನೌಕರರಾದ ರಾಮನಗೌಡರ ಮತ್ತು ಬಣಕಾರ ಇದ್ದರು.