ಹಾವೇರಿ:ಅಧಿಕೃತ ಲಾಕ್ಡೌನ್ ಘೋಷಣೆ ನಂತರ ನೋಂದಾಯಿಸಿಕೊಂಡಿರುವ ಕಾರ್ಮಿಕರಿಗೂ ಕೋವಿಡ್-19 ಸಹಾಯಧನವನ್ನು ನೀಡಬೇಕು, ಕೋವಿಡ್-19ಗೆ ತುತ್ತಾಗಿರುವ ಕಾರ್ಮಿಕರ ವೈದ್ಯಕೀಯ ವೆಚ್ಚವನ್ನು ಭರಿಸಬೇಕು ಮತ್ತು ಆ ಅವಧಿಯ ವೇತನ ನೀಡಬೇಕು ಎಂದು ಒತ್ತಾಯಿಸಿಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಎಐಯುಟಿಯುಸಿ ವತಿಯಿಂದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಅರ್ಜಿ ಸಲ್ಲಿಸಿದ ನಿಗದಿತ ಕಾಲಮಿತಿ ಒಳಗಡೆ ಅರ್ಹ ಕಾರ್ಮಿಕರ ಖಾತೆಗೆ ಹಣ ಸಂದಾಯ ಮಾಡಬೇಕು. ಹೊಸ ಮತ್ತು ನವೀಕರಣಕ್ಕಾಗಿ ಕಾರ್ಮಿಕರು ಸಲ್ಲಿಸುವ ಅರ್ಜಿಗಳನ್ನು ಕಾಲಮಿತಿ ಒಳಗೆ ಅನುಮೋದನೆ ನೀಡಬೇಕು. ಮಂಡಳಿಯಿಂದ ಬಿಎಂಟಿಸಿಯಲ್ಲಿ ಉಚಿತ ಬಸ್ ಪಾಸ್ ನೀಡುತ್ತಿರುವಂತೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿಯೂ ಉಚಿತ ಬಸ್ಪಾಸ್ ಅನ್ನು ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಚಿಕಿತ್ಸಾ ಭಾಗ್ಯವನ್ನು ಕಟ್ಟಡ ಕಾರ್ಮಿಕನ ಕುಟುಂಬದ ಸದಸ್ಯರಿಗೂ ವಿಸ್ತರಿಸಬೇಕು. ಪಿಂಚಣಿ ಯೋಜನೆಗೆ ಅರ್ಹರಾಗಿರುವ ಕಾರ್ಮಿಕರಿಗೆ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು ಎನ್ನುವ ಷರತ್ತನ್ನು ತೆಗೆದುಹಾಕಿ ವಯಸ್ಸಿನ ಆಧಾರದಲ್ಲಿ ಅರ್ಜಿ ಸಲ್ಲಿಸದಿದ್ದರೂ ಪಿಂಚಣಿ ನೀಡಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಪ್ರತಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನೋಂದಾಯಿತ ಹಾಗೂ ಚಾಲ್ತಿಯಲ್ಲಿರುವ ಕಟ್ಟಡ ಕಾರ್ಮಿಕರ ಸಂಘಟನೆಗಳೊಂದಿಗೆ ಕಟ್ಟಡ ಕಾರ್ಮಿಕರ ಕುಂದುಕೊರತೆ ಸಭೆ ಕರೆಯಬೇಕುಎಂದು ಮನವಿಯಲ್ಲಿ ತಿಳಿಸಿದ್ದಾರೆ.