ಹಾವೇರಿ: ಚುನಾವಣಾ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮರಣ ಹೊಂದಿದ ಹಾನಗಲ್ ತಾಲ್ಲೂಕಿನ ತುಮರಿಕೊಪ್ಪದ ಗ್ರಾಮ ಸಹಾಯಕ ಸುರೇಶ ತಳವಾರ ಮತ್ತು ಚಿಕ್ಕಹುಲ್ಲಾಳದ ಗ್ರಾಮ ಸಹಾಯಕ ಉಡಚಪ್ಪ ದೊಡ್ಡಮನಿ ಅವರ ಕುಟುಂಬಗಳಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ತಲಾ ಕುಟುಂಬಕ್ಕೆ ₹ 15 ಲಕ್ಷ ಪರಿಹಾರವನ್ನು ನೀಡಲಾಗಿದೆ.
ಸುರೇಶ ತಳವಾರ ಮತ್ತು ಉಡಚಪ್ಪ ದೊಡ್ಡಮನಿ ಈ ಇಬ್ಬರನ್ನು ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಅವಶ್ಯವಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಹಾವೇರಿ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಒದಗಿಸಲು ನಿಯೋಜಿಸಲಾಗಿತ್ತು. 2020ರ ನವೆಂಬರ್ 17ರಂದು ಕರ್ತವ್ಯ ನಿರ್ವಹಿಸಿ, ತಮ್ಮ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಇಬ್ಬರೂ ಮೃತಪಟ್ಟಿದ್ದರು.
ಈ ಕುರಿತು, ಚುನಾವಣಾ ಆಯೋಗಕ್ಕೆ ಜಿಲ್ಲಾಡಳಿತದಿಂದ ಪತ್ರ ಬರೆದು, ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಕೋರಲಾಗಿತ್ತು. ಅದರಂತೆ ಚುನಾವಣಾ ಆಯೋಗ ಪರಿಹಾರ ನೀಡಲು ನಿರ್ದೇಶನ ನೀಡಿತು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.