ರಾಣೆಬೆನ್ನೂರು: ‘ಶಿವಾಜಿ ಪ್ರತಿಮೆಗೆ ಸ್ವಾಮೀಜಿಯೊಬ್ಬರು ಮಾಲಾರ್ಪಣೆ ಮಾಡಿದ್ದರಿಂದ ಅಪವಿತ್ರವಾಗಿದೆ’ ಎಂದು ಆರೋಪಿಸಿ ತಾಲ್ಲೂಕಿನ ಆರೆಮಲ್ಲಾಪುರ ಗ್ರಾಮಸ್ಥರು ಸೋಮವಾರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.
ಬೆಳಿಗ್ಗೆಯಿಂದಲೇ ಯುವಕರು ಶಿವಾಜಿ ಮೂರ್ತಿಯಿದ್ದ ಜಾಗವನ್ನು ಸ್ವಚ್ಛಗೊಳಿಸಿದರು. ಶಿವಾಜಿ ವೃತ್ತದ ಸುತ್ತ ತಳಿರು ತೋರಣ ಕಟ್ಟಿ ವಿವಿಧ ಹೂವು ಮತ್ತು ರಂಗೋಲಿಯಿಂದ ಶೃಂಗರಿಸಿದರು.
ದಾವಣಗೆರೆ ಶಿರಡಿ ಸಾಯಿಬಾಬಾ ಗುರುದೇವ ಸ್ವಾಮೀಜಿ ಅವರು ಕ್ಷೀರಾಭಿಷೇಕ, ಹೋಮ ಹವನ ಹಾಗೂ ವಿಶೇಷ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಕಲ ವಾದ್ಯಗಳೊಂದಿಗೆ ಶಿವಾಜಿ ಭಾವಚಿತ್ರದ ಮೆರವಣಿಗೆ ಮಾಡಿದರು. ನಂತರ ಅನ್ನಸಂತರ್ಪಣೆ ಮಾಡಿದರು.
‘ಭಾನುವಾರ ಪೊಲೀಸ್ ಭದ್ರತೆ ಯಲ್ಲಿ ಇದೇ ಗ್ರಾಮದ ಶರಣಬಸವೇಶ್ವರ ಮಠದ ಪ್ರಣಾವಾನಂದರಾಮ ಸ್ವಾಮೀಜಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಇದು ಆರೇಮಲ್ಲಾಪುರ ಗ್ರಾಮದ ಜನರಿಗೆ ಇಷ್ಟವಿರಲಿಲ್ಲ.
ಹೀಗಾಗಿ ಗ್ರಾಮಸ್ಥರು ದಾವಣಗೆರೆಯ ಸ್ವಾಮೀಜಿ ಕರೆಯಿಸಿ ಅವರ ನೇತೃತ್ವದಲ್ಲಿ ಶಿವಾಜಿ ಮೂರ್ತಿಗೆ ಕ್ಷೀರಾಭೀಷೇಕ, ಹೋಮ ಹವನ ಮಾಡಿಸುವ ಮೂಲಕ ಪಾವಿತ್ರ್ಯಗೊಳಿಸಿದರು’ ಎಂದು ಸ್ಥಳೀಯರು ತಿಳಿಸಿದರು.