ಹಾವೇರಿ: ‘ಶ್ರಮ ಜೀವನ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯುತ್ತದೆ. ಹಾಗಾಗಿ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯವಾಗುತ್ತದೆ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಓಂಕಾರ ಕಾಕಡೆ ಅಭಿಪ್ರಾಯಪಟ್ಟರು.
ನಗರದ ಶಿವಲಿಂಗೇಶ್ವರ ಪದವಿ ಮಹಿಳಾ ಕಾಲೇಜಿನಲ್ಲಿ ಈಚೆಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕಾಲೇಜುಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಉನ್ನತ ಕಾಲೇಜುಗಳಲ್ಲಿ ಇದೂ ಒಂದಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಈ ಕಾಲೇಜಿಗೆ ಉನ್ನತ ಸ್ಥಾನಮಾನ ದೊರೆಯಲಿದೆ ಎಂದು ತಿಳಿಸಿದರು.
ಎಸ್.ಎಸ್.ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.ಬಿ.ಬಸವರಾಜ ಮತ್ತು ವಿ.ವಿ.ಅಂಗಡಿ ಮಾತನಾಡಿದರು. ಬಿ.ಎಂ. ನೇಕಾರ ಸ್ವಾಗತಿಸಿದರು. ಪ್ರಾಚಾರ್ಯರಾದ ಡಾ.ಸವಿತಾ ಎಸ್.ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಬಿ.ವಿ ಹಿರೇಮಠ ವಂದಿಸಿದರು. ಎಸ್.ಬಿ.ಗಾಜೀಪುರ ನಿರೂಪಿಸಿದರು.