ಹಾವೇರಿ: ಮತದಾರರ ಪಟ್ಟಿ ಪರಿಶೀಲನೆಗೆ ಸಲಹೆ

ಹಾವೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ಸೇರ್ಪಡೆ ಮಾರ್ಪಾಡು ತಿದ್ದುಪಡಿ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪರಿಶೀಲನೆ ನಡೆಸಿ, ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಚುನಾವಣಾ ಖರ್ಚು ವೆಚ್ಚ ನಿರ್ವಹಣೆ ಕುರಿತಂತೆ ವಿವಿಧ ದರಪಟ್ಟಿಗಳ ಕುರಿತಂತೆ ದರಪಟ್ಟಿಗಳ ಅಂತಿಮಗೊಳಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಅವರು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿ ಮತದಾರರ ಪಟ್ಟಿಯ ಪ್ರತಿ ಹಾಗೂ ಸಿಡಿಗಳನ್ನು ಒದಗಿಸಲಾಗುವುದು. ಪರಿಶೀಲನೆ ನಡೆಸಿ ಹೆಸರುಗಳ ತಪ್ಪು ಇತರ ತಿದ್ದುಪಡಿಗಳ ಕುರಿತಂತೆ ಮಾಹಿತಿ ನೀಡಲು ತಿಳಿಸಿದರು.
ದರಪಟ್ಟಿ ಅಂತಿಮ: ಚುನಾವಣಾ ಪ್ರಚಾರ ಕಾರ್ಯಗಳಿಗಾಗಿ ಅಭ್ಯರ್ಥಿಗಳು ಬಳಸುವ ವಿವಿಧ ಪ್ರಚಾರ ಸಾಮಗ್ರಿ, ವಾಹನ ಬಾಡಿಗೆ, ಊಟ ಉಪಾಹಾರ, ಜಾಹಿರಾತು ಒಳಗೊಂಡಂತೆ ದರಪಟ್ಟಿಗಳನ್ನು ಚರ್ಚಿಸಿ ಅಂತಿಮಗೊಳಿಸಲಾಯಿತು. ವಿವಿಧ ನಮೂನೆಯ ವಾಹನಗಳ ಬಾಡಿಗೆಯ ದರ, ಬ್ಯಾನರ್, ಬಂಟಿಂಗ್ಸ್, ಕರಪತ್ರ ಒಳಗೊಂಡಂತೆ ವಿವಿಧ ಬಗೆಯ ಪ್ರಚಾರ ಸಾಮಗ್ರಿಗಳ ಮುದ್ರಣ, ಚುನಾವಣಾ ಪ್ರಚಾರಗಳಿಗೆ ಬಳಸುವ ಶಾಮಿಯಾನ, ಚೇರ್, ಮೈಕ್ ಸೇರಿದಂತೆ ವಿವಿಧ ವಸ್ತುಗಳ ದರ ಬಾಡಿಗೆ ಕೊಠಡಿಗಳ ದರ, ಆಹಾರ ಪದಾರ್ಥಗಳ ದರ ಹಾಗೂ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತು ವೆಚ್ಚಗಳ ದರ ಕುರಿತಂತೆ ಅಂತಿಮಗೊಳಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ವಸಂತಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ಆರ್.ರಂಗನಾಥ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ಸಿಪಿಐ (ಎಂ) ಹಾಗೂ ಬಿಎಸ್ಪಿ ಪಕ್ಷಗಳ ಮುಖಂಡರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.