ಬ್ಯಾಡಗಿ (ಹಾವೇರಿ ಜಿಲ್ಲೆ): ‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ವರ್ತಕ ಮೊಹಮ್ಮದ್ ಶಫಿ ನಾಸಿಪುಡಿ ಮೇಲೆ ಸರ್ಕಾರ ಕೈಕೊಳ್ಳುವ ಎಲ್ಲಾ ಕಾನೂನು ಕ್ರಮಗಳನ್ನು ಸ್ವಾಗತಿಸುವೆ’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
‘ಫೆಬ್ರುವರಿ 27ರಂದು ಮೊಹಮ್ಮದ್ ಶಫಿ ಬೆಂಗಳೂರಿಗೆ ಬಂದಿದ್ದು ನನಗೆ ಗೊತ್ತಿಲ್ಲ. ನನ್ನನ್ನೂ ಭೇಟಿಯಾಗಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಮಾಧ್ಯಮಗಳಿಂದ ತಿಳಿದು ಬಂತು. ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಉತ್ತಮ ವ್ಯಾಪಾರ ಮಾಡಿಕೊಂಡಿದ್ದ ಮೊಹಮ್ಮದ್ ಶಫಿ, ದೇಶದ ವಿರುದ್ಧ ಘೋಷಣೆ ಕೂಗಿದ್ದು ನನಗೆ ನೋವಾಗಿದೆ. ವಿಧಾನಸೌಧಕ್ಕೆ ಹೋಗುವ ಮೊದಲು ನನ್ನ ಹತ್ತಿರ ಬಂದಿಲ್ಲ. ಮುಖ ಸಹ ತೋರಿಸಿಲ್ಲ. ಅವರಿಗೆ ಪಾಸ್ ಕೊಡುವ ವಿಷಯ ಉದ್ಭವಿಸುವುದಿಲ್ಲ. ಅವರಿಗೆ ಪಾಸ್ ನೀಡಿದ ಆರೋಪ ಸತ್ಯಕ್ಕೆ ದೂರ’ ಎಂದರು.