ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಹೊಸ ತಾಲ್ಲೂಕಿನ ಮಾನ್ಯತೆ; ಸೌಲಭ್ಯಗಳ ಕೊರತೆ

ನಾಲ್ಕು ವರ್ಷ ಕಳೆದರೂ ಕಾಣದ ನಿರೀಕ್ಷಿತ ಪ್ರಗತಿ: ನಾಮಫಲಕಕ್ಕೆ ಸೀಮಿತವಾದ ಕಚೇರಿಗಳು
Last Updated 14 ಫೆಬ್ರುವರಿ 2022, 5:51 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಆಡಳಿತಾತ್ಮಕ ದೃಷ್ಟಿ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ಸಣ್ಣ ತಾಲ್ಲೂಕುಗಳ ರಚನೆ ಉತ್ತಮ ಎಂಬ ಉದ್ದೇಶದಿಂದ ಹಿರೇಕೆರೂರು ತಾಲ್ಲೂಕು ವಿಭಜಿಸಿ ರಟ್ಟೀಹಳ್ಳಿ ಹೊಸ ತಾಲ್ಲೂಕು ಅಸ್ತಿತ್ವಕ್ಕೆ ಬಂದಿತು. ತಾಲ್ಲೂಕು ರಚನೆಯಾಗಿ ನಾಲ್ಕು ವರ್ಷಗಳು ಕಳೆದರೂ ತಾಲ್ಲೂಕು ಕೇಂದ್ರದಲ್ಲಿ ಅಗತ್ಯ ಸೇವೆ ಲಭ್ಯವಾಗದೇ, ನಿರೀಕ್ಷಿತ ಅಭಿವೃದ್ಧಿ ಕಾಣದೇ ಇರುವುದು ಕಣ್ಣಿಗೆ ಕಾಣುತ್ತಿದೆ.

ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಬಹಷ್ಟು ಇಲಾಖೆಗಳು ಇಲ್ಲಿ ನಾಮಫಲಕಕ್ಕೆ ಮಾತ್ರ ಸೀಮಿತವಾಗಿವೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ನೋಂದಣಿ ಅಧಿಕಾರಿಗಳ ಕಚೇರಿ, ಕೃಷಿ ಇಲಾಖೆ ಕಚೇರಿ ಹೀಗೆ ಹಲವಾರು ತಾಲ್ಲೂಕು ಕೇಂದ್ರ ಕಚೇರಿಗಳನ್ನು ಗುರುತಿಸಿ ನಾಮಫಲಕ ಹಾಕಲಾಗಿದೆ.

ಆದರೆ, ಆ ಕಚೇರಿಗಳು ಪ್ರಾರಂಭಗೊಳ್ಳದೇ ಕಟ್ಟಡಗಳು ಹಾಳಾಗಿವೆ. ಸದ್ಯ ತಹಶೀಲ್ದಾರ್ ಕಾರ್ಯಾಲಯ, ನೀರಾವರಿ ಇಲಾಖೆ, ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಂದಾಯ ನಿರೀಕ್ಷರ ಕಚೇರಿ ಮಾತ್ರ ಕಾರ್ಯಾರಂಭಗೊಂಡಿವೆ. ಉಳಿದ ತಾಲ್ಲೂಕು ಮಟ್ಟದ ಕಚೇರಿಗಳು ಇನ್ನೂ ಹಿರೇಕೆರೂರಿನಲ್ಲಿಯೇ ಉಳಿದಿವೆ. ಹೀಗಾಗಿ ಸಾರ್ವಜನಿಕರು ಕಚೇರಿ ಕಾರ್ಯಗಳಿಗೆ ಇನ್ನೂ ಹಿರೇಕೆರೂರಿಗೆ ಅಲೆಯುವುದು ತಪ್ಪಿಲ್ಲ.

ಅಭಿವೃದ್ದಿ ಆಮೆಗತಿಯಲ್ಲಿ:

‘ಹೊಸ ತಾಲ್ಲೂಕಿಗೆ ನಾಲ್ಕು ವರ್ಷವಾಗಿದೆ. ಅಭಿವೃದ್ಧಿ ಮಾತ್ರ ಆಮೆಗತಿಯಲ್ಲಿದೆ. ಈಗಾಗಲೇ ತಾಲ್ಲೂಕು ಕಚೇರಿ ಸಂಕೀರ್ಣ ನಿರ್ಮಿಸಬೇಕಾಗಿತ್ತು, ಕೋರ್ಟ್ ನಿರ್ಮಿಸಬೇಕಿತ್ತು. ತಾಲ್ಲೂಕಿನ ಸಂಪೂರ್ಣ ಅಭಿವೃದ್ಧಿಯಾಗಿಲ್ಲ’ ಎಂದು ರಟ್ಟೀಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಡಿ.ಬಸನಗೌಡ್ರ ಆರೋಪಿಸಿದರು.

‘ಹೊಸದಾಗಿ ಪಿ.ಎಲ್.ಡಿ. ಬ್ಯಾಂಕ್, ಎಪಿಎಂಸಿ ಹಾಗೂ ಕೋರ್ಟ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಸರ್ಕಾರಿ ಭೂಮಿ ಇದೆ. ಕೆಲವೊಂದು ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ ಇವುಗಳನ್ನು ಭರ್ತಿ ಮಾಡಬೇಕು. ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುವಂತಾಗಬೇಕು’ ಎಂದು ‌ರಟ್ಟೀಹಳ್ಳಿ ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಪಾಲಾಕ್ಷಗೌಡ ಪಾಟೀಲ ತಿಳಿಸಿದರು.

ತಾಲ್ಲೂಕು ಕಚೇರಿ ಸಂಕೀರ್ಣಕ್ಕೆ ಸಿದ್ಧತೆ:

ಪಟ್ಟಣದ ಬೀಜೋತ್ಪಾದನಾ ಕೆಂದ್ರದಲ್ಲಿನ ಸರ್ಕಾರಿ ಜಮೀನಿನಲ್ಲಿ 29 ಎಕರೆ 10 ಗುಂಟೆ ಪ್ರದೇಶವನ್ನು ತಾಲ್ಲೂಕು ಮಟ್ಟದ ಕಚೇರಿ ತಾಲ್ಲೂಕು ಕ್ರೀಡಾಂಗಣ, ಸಿಬ್ಬಂದಿಯ ವಸತಿ ಸಂಕೀರ್ಣ ನಿರ್ಮಿಸಲು ಕೃಷಿ ಸಚಿವ ಸಚಿವ ಬಿ.ಸಿ.ಪಾಟೀಲ ಸರ್ಕಾರದಿಂದ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆಗೆ ಮುಂದಾದರು. ಸರ್ಕಾರಿ ಜಾಗದ ಕುರಿತು ಖಾಸಗಿ ವ್ಯಕ್ತಿಗಳು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ತಾಲ್ಲೂಕು ಸಂಕೀರ್ಣ ಯೋಜನೆಗೆ ಹಿನ್ನಡೆಯಾಯಿತು. ನಂತರ ನ್ಯಾಯಾಲಯದ ತೀರ್ಪು ಬಂದ ನಂತರ ಈ ಜಾಗೆಯು ಕಂದಾಯ ಇಲಾಖೆಗೆ ಹಸ್ತಾಂತರಿಸಿ ತಾಲ್ಲೂಕು ಕಚೇರಿ ಸಂಕೀರ್ಣಕ್ಕೆ ಸಿದ್ಧತೆ ನಡೆದಿದೆ.

ಪ್ರಗತಿಯತ್ತ ಹೊಸ ತಾಲ್ಲೂಕು:

ಕೃಷಿ ಸಚಿವ ಬಿ.ಸಿ.ಪಾಟೀಲ ಸಾಕಷ್ಟು ಅನುದಾನವನ್ನು ರಟ್ಟೀಹಳ್ಳಿಗೆ ತಂದಿದ್ದಾರೆ. ರಟ್ಟೀಹಳ್ಳಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣ, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಹೊಸ ಸರ್ಕಾರಿ ಪ್ರೌಢಶಾಲೆಗಳ ಪ್ರಾರಂಭ, ರಟ್ಟೀಹಳ್ಳಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭ, ₹5 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ವಿದ್ಯುತ್ ದೀಪ ಒಳಗೊಂಡ ದ್ವಿಪಥ ರಸ್ತೆ, ತೋಟಗಂಟಿ, ಹಿರೇಮೊರಬ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಮದಗ ಮಾಸೂರು ಕೆರೆ ಅಭಿವೃದ್ಧಿ, ಕಡೂರ ಬಳಿ ₹19 ಕೋಟಿ ವೆಚ್ಚದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ರಟ್ಟೀಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಕಂದಾಯ ಇಲಾಖೆ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕು ಪಂಚಾಯ್ತಿ, ಉಪಖಜಾನೆ, ಪಶುವೈದ್ಯ ಇಲಾಖೆ, ಆರೋಗ್ಯ ಇಲಾಖೆ, ಹೆಸ್ಕಾಂ ಸ್ವಂತ ಕಟ್ಟಡ ಹೊಂದಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ.

ಜನಪ್ರತಿನಿಧಿಗಳ ಪ್ರಯತ್ನದ ಫಲ:

ರಟ್ಟೀಹಳ್ಳಿ ತಾಲ್ಲೂಕು ರಚನೆಯ ಅಗತ್ಯವನ್ನು ಮನಗಂಡ ಅಂದಿನ ಶಾಸಕರಾಗಿದ್ದ ಯು.ಬಿ.ಬಣಕಾರ ಮತ್ತು ಅಂದಿನ ಮಾಜಿ ಶಾಸಕ ಬಿ.ಸಿ.ಪಾಟೀಲ ಜನರ ಹೋರಾಟಕ್ಕೆ ಬೆಂಬಲವಾಗಿ ನಿಂತರು. ರಾಜ್ಯದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಬಿ.ಸಿ. ಪಾಟೀಲರು ತಮ್ಮದೇ ಪ್ರಭಾವ ಬೀರಿ ತಾಲ್ಲೂಕು ಕೇಂದ್ರವಾಗುವಂತೆ ನೋಡಿಕೊಂಡರು.

ಮುಖ್ಯಮಂತ್ರಿ ಸಿದ್ಧರಾಮಯ್ಯ 63 ಹಳ್ಳಿಗಳನ್ನು ಒಳಗೊಂಡ ರಟ್ಟೀಹಳ್ಳಿಯನ್ನು ಹೊಸ ತಾಲ್ಲೂಕಾಗಿ ನ.20, 2017ರಲ್ಲಿ ಘೋಷಿಸಿದರು. ಕರ್ನಾಟಕ ನೀರಾವರಿ ಇಲಾಖೆಯ ಕಚೇರಿಯಲ್ಲಿ ಫೆ.24, 2018ರಂದು ಅಂದಿನ ಜವಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ತಹಶೀಲ್ದಾರ್ ಕಾರ್ಯಾಲಯ ಉದ್ಘಾಟಿಸಿದರು.

ಬಿಡುಗಡೆಯಾದ ಅನುದಾನ

2018ರಲ್ಲಿ ₹25 ಲಕ್ಷ ಅನುದಾನ ಬಿಡುಗಡೆ. ಅದರಲ್ಲಿ ಕಟ್ಟಡದ ದುರಸ್ತಿ, ಬಣ್ಣ, ಸುಣ್ಣ, ಇತ್ಯಾದಿ.

2019ರಲ್ಲಿ ₹5 ಲಕ್ಷ ಅನುದಾನ ಬಿಡುಗಡೆ. ಇದರಲ್ಲಿ ಕಟ್ಟಡ ದುರಸ್ತಿ, ಕಚೇರಿ ಸ್ಟೇಷನರಿ, ಪೀಠೋಪಕರಣ, ಕಂಪ್ಯೂಟರ ಇತ್ಯಾದಿ.

2021ರಲ್ಲಿ ₹8 ಲಕ್ಷ ಅನುದಾನ ಬಿಡುಗಡೆ. ಕಟ್ಟಡ ದುರಸ್ತಿ, ಪೀಠೋಪಕರಣ, ಕಂಪ್ಯೂಟರ್‌ ಖರೀದಿ, ಪ್ರಿಂಟರ್ಸ್, ಸ್ಟೇಷನರಿ ಖರೀದಿ.

ತಾಲ್ಲೂಕು ರಚನೆ ಹಿನ್ನೆಲೆ

126 ಹಳ್ಳಿಗಳನ್ನೊಳಗೊಂಡ ದೊಡ್ಡ ತಾಲ್ಲೂಕಾಗಿದ್ದ ಹಿರೇಕೆರೂರು ತಾಲ್ಲೂಕು ಕೇಂದ್ರಕ್ಕೆ ಹಳ್ಳೂರು ಗ್ರಾಮದಿಂದ ಬರಬೇಕಾದರೆ 40 ಕಿ.ಮೀ. ಅಂತರವಿದೆ. ಅಲ್ಲಿಂದ ತಾಲ್ಲೂಕು ಕೇಂದ್ರಕ್ಕೆ ಬರಬೇಕಾದರೆ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತದೆ.

ಹೀಗಾಗಿ ರಟ್ಟೀಹಳ್ಳಿ ವಿಂಗಡನೆ ಮಾಡಿ ಹೊಸ ತಾಲ್ಲೂಕು ರಚನೆ ಮಾಡಿದರೆ ಜನತೆಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ 2004ರ ಆಗಸ್ಟ್‌ 1ರಂದು ರಟ್ಟೀಹಳ್ಳಿ ಬಂಟೇಶ್ವರ ದೇವಸ್ಥಾನದಲ್ಲಿ ಪಕ್ಷಾತೀತವಾಗಿ ಸಭೆ ನಡೆದು, ತಾಲ್ಲೂಕು ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತು.

ಸರ್ಕಾರ ನೇಮಿಸಿದ್ದ ಗದ್ದಿಗೌಡರ ಹಾಗೂ ಹುಂಡೇಕಾರ ಸಮಿತಿಯು ರಟ್ಟೀಹಳ್ಳಿ ತಾಲ್ಲೂಕಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದಾಗಿ ಶಿಫಾರಸು ಮಾಡಿದ್ದರೂ ನಿಯೋಜಿತ ತಾಲ್ಲೂಕು ಪಟ್ಟಿಯಿಂದ ರಟ್ಟೀಹಳ್ಳಿಯನ್ನು ಕೈಬಿಡಲಾಗಿತ್ತು. ಇದರಿಂದಾಗಿ ತಾಲ್ಲೂಕು ಹೋರಾಟ ಸಮಿತಿ 2007ರ ಜುಲೈ 12ರಂದು ರಟ್ಟೀಹಳ್ಳಿ ಬಂದ್ ಮಾಡಿ ಬೃಹತ್‌ ಪ್ರತಿಭಟನೆ ಸೇರಿದಂತೆ ಹಲವು ಹೋರಾಟಗಳು ನಡೆದಿವೆ.

ಸಾಮರ್ಥ್ಯ ಸೌಧಕ್ಕೆ ಅನುದಾನ

‘ತಾಲ್ಲೂಕು ಹಂತದ ಕಚೇರಿಗಳನ್ನು ಸರ್ಕಾರ ಗುರುತಿಸಿದ 29 ಎಕರೆ ಪ್ರದೇಶದಲ್ಲಿ ಸಾಮರ್ಥ್ಯ ಸೌಧ (ತಾಲ್ಲೂಕು ಆಡಳಿತ ಕಚೇರಿಗಳ ಸಂಕೀರ್ಣ) ನಿರ್ಮಿಸಲು ಕಂದಾಯ ಸಚಿವರು ₹10 ಕೋಟಿ ಅನುದಾನ ನೀಡಿದ್ದಾರೆ. ಅಗ್ನಿಶಾಮಕ ದಳ ಕಚೇರಿಗೆ 2 ಎಕರೆ ನೀಡಲಾಗಿದ್ದು, ಶೀಘ್ರದಲ್ಲಿಯೇ ರಟ್ಟೀಹಳ್ಳಿಯಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ಮೀಸಲಿದೆ’ ಎಂದು ರಟ್ಟೀಹಳ್ಳಿ ತಹಶೀಲ್ದಾರ್ ಅರುಣಕುಮಾರ ಕಾರಗಿ ಹೇಳಿದರು.

4 ವರ್ಷವಾದರೂ ತಾಲ್ಲೂಕು ಮಟ್ಟದ ಕಚೇರಿಗಳು ಪ್ರಾರಂಭಗೊಂಡಿಲ್ಲ. ಸಾರ್ವಜನಿಕರು ಹಿರೇಕೆರೂರಿಗೆ ಅಲೆಯುವುದು ತಪ್ಪಿಲ್ಲ
– ಬಸನಗೌಡ ಗಂಗಪ್ಪಳವರ, ರೈತ ಮುಖಂಡ

ಪಟ್ಟಣ ಪಂಚಾಯ್ತಿಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ಸಂಪೂರ್ಣ ಕುಸಿದುಹೋಗಿದೆ. ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ.
– ಹನುಮಂತಪ್ಪ ಗಾಜೇರ, ತಾಲ್ಲೂಕಾ ಆದಿಜಾಂಭವ ಮಾದಿಗ ಸಮಾಜದ ಅಧ್ಯಕ್ಷ

ರಟ್ಟೀಹಳ್ಳಿ ಪಟ್ಟಣಕ್ಕೆ ತುಂಗಾಭದ್ರಾ ನದಿಯಿಂದ ನೀರು ಸಿಗದೆ ಜನರು ಪರದಾಡುವಂತಾಗಿದೆ. ಬಡವರಿಗೆ ಮನೆಗಳ ಹಂಚಿಕೆಯಾಗಿಲ್ಲ.
– ಪಿ.ಡಿ.ಬಸನಗೌಡ್ರ, ರಟ್ಟೀಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಪ್ರದೀಪ ಕುಲಕರ್ಣಿ ಮತ್ತು ಕೆ.ಎಚ್‌.ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT