ರಾಣೆಬೆನ್ನೂರು: ‘ಸಣ್ಣ, ಅತಿ ಸಣ್ಣ ರೈತರಿಗೆ ಪಶು ಸಂಗೋಪನೆ ಬಗ್ಗೆ ಮಾಹಿತಿ ನೀಡಲು ಪಶು ಸಖಿಗಳು ಪಶು ವೈದ್ಯಾಧಿಕಾರಿಗೆ ಸಹಕಾರ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಸುಮಲತಾ ಎಸ್.ಪಿ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾವೇರಿ, ತಾಲ್ಲೂಕು ಪಂಚಾಯಿತಿ ಹಾಗೂ ಪಶುವೈದ್ಯ ಇಲಾಖೆ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ 40 ಗ್ರಾಮ ಪಂಚಾಯಿತಿಯ ಪಶುಸಖಿಯರ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಶು ಇಲಾಖೆ ಸಹಾಯಕ ನಿರ್ದೇಶ ಡಾ.ಪರಮೇಶ್ವರ ಹುಬ್ಬಳ್ಳಿ, ‘ಪಶು ಸಖಿಗಳು ಪಶುಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಕಾರ್ಯಗಳನ್ನು ನಿರ್ವಹಿಸಿ, ಗ್ರಾಮೀಣ ಭಾಗದ ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು’ ಎಂದರು.
ಪಶು ಸಖಿಗಳ ಕಾರ್ಯಗಳ ಬಗ್ಗೆ, ಪಶುಗಳಿಗೆ ಕಾಣಿಸಿಕೊಳ್ಳುವ ರೋಗಗಳು, ಪ್ರಾಥಮಿಕ ಚಿಕಿತ್ಸೆ, ಪಶುಗಳ ಪೋಷಣೆ ಮತ್ತು ಪೌಷ್ಠಿಕ ಆಹಾರ, ಹೆಚ್ಚುವರಿ ಹಾಲಿನ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.
ಡಾ. ಎಚ್.ಸಿ. ಪಾಟೀಲ, ಡಾ.ಪವನ್ ಬೆಳಕೇರಿ, ಡಾ. ಪವನ್ ಬಿ.ಎಲ್ ತರಬೇತಿ ನೀಡಿದರು.
ಎನ್ಆರ್ಎಲ್ಎಂನ ವಲಯ ಮೇಲ್ವಿಚಾರಕ ಹನುಮಂತಪ್ಪ ಸಾರಥಿ, ಟಿಪಿಎಂ ಅನಿಲ್ ಕುಮಾರ ಇದ್ದರು.