ಹಾವೇರಿ:‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರ ಬಡವರಿಗೆ, ಸ್ತ್ರೀ ಸಂಘಗಳಿಗೆ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಗೆ ಸಹಾಯ ಮಾಡುತ್ತ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಕೆಸಿಸಿ ಬ್ಯಾಂಕ್ ಕೂಡಲ ಶಾಖೆಯ ನಿರ್ದೇಶಕ ಮಾಲತೇಶ ಸೊಪ್ಪಿನ ಹೇಳಿದರು.
ಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮದ ಗುರುನಂಜೇಶ್ವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಎಸ್ಎಸ್ ಬ್ಯಾಂಕ್ ಕೂಡಲ, ಹಾಲು ಉತ್ಪಾದಕರ ಸಂಘು ಸೋಮವಾರ ಹಮ್ಮಿಕೊಂಡಿದ್ದ ಬೆಳಗಾಲಪೇಟೆ ವಲಯ ಮಟ್ಟದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಅನುಕೂಲಕ್ಕೆ ಕೃಷಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ಸಂತಸದ ಸಂಗತಿ. ರಾಸಾಯನಿಕ ಗೊಬ್ಬರದಿಂದ ಭೂಮಿ ಬರಡಾಗಿದೆ. ರೈತರು, ರೈತ ಮಹಿಳೆಯರು ಹೈನುಗಾರಿಕೆ ಹೆಚ್ಚು ಒತ್ತು ನೀಡುವ ಮೂಲಕ ಎರೆಹುಳು ಗೊಬ್ಬರ ಬಳಸಿಕೊಂಡು ಸಾವಯವ ಕೃಷಿಗೆ ಮನಸು ಮಾಡಬೇಕು ಎಂದು ಸಲಹೆ ಮಾಡಿದರು.
ಸಾನಿಧ್ಯ ವಹಿಸಿದ್ದ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ದೇವರು ಮಾತನಾಡಿ, ಪ್ರತಿಯೊಬ್ಬರು ಸಮುಯ ಪ್ರಜ್ಞೆ ಅರಿತು ಕೆಲಸ ಮಾಡಬೇಕು.ನಾವೆಲ್ಲ ಒಂದೇ ಎನ್ನುವ ಮನೋಭಾವ ಹೊಂದಿದಾಗ ಮಾತ್ರ ಸಂಘಗಳು ಬೆಳೆದು ಬರಲು ಸಾಧ್ಯ ಎಂದರು.
ಕೂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಮ್ಮ ಚನ್ನಬಸವಗೌಡ್ರ ಮುದಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೆ.ಸದಾನಂದ, ವಿ.ಎಸ್.ಎಸ್. ಬ್ಯಾಂಕಿನ ಕೂಡಲ ಶಾಖೆಯ ಉಪಾಧ್ಯಕ್ಷ ಸಂಗಪ್ಪ ಹರವಿ, ಗ್ರಾಮಸ್ಥರಾದ ಮಹಾಬಳೇಶ್ವರಪ್ಪ ಮಾವಿನಮರದ, ಕಲ್ಮೇಶ ವಿಜಾಪುರ ಪಾಲ್ಗೊಂಡಿದ್ದರು.
ಸಂಘದ ಮೇಲ್ವಿಚಾರಕ ಗಿರೀಶ ಸ್ವಾಗತಿಸಿದರು. ವೈ.ಎನ್.ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಸುಮಾ ಕೂಡಲ ವಂದಿಸಿದರು.