ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ

Published 8 ಮಾರ್ಚ್ 2024, 9:22 IST
Last Updated 8 ಮಾರ್ಚ್ 2024, 9:22 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದಲ್ಲಿ ಈಗಾಗಲೇ 14 ಸಾವಿರ ಶಿಕ್ಷಕರ ನೇಮಕಾತಿಯಾಗಿದ್ದು, ಶೀಘ್ರವೇ ಮತ್ತೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಅನುಮೋದನೆ ದೊರೆತ ತಕ್ಷಣ ನೇಮಕ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಗರದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿಯಲ್ಲಿ ಶುಕ್ರವಾರ ಅಕ್ಷರ ಆವಿಷ್ಕಾರ ಅಭಿಯಾನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ 43,100 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಸಿಕ ₹ 10 ಸಾವಿರ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ₹ 10,200 ವೇತನ ನೀಡಲಾಗುತ್ತಿದೆ. ಹಂತಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು‘ ಎಂದರು. 

‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಾದ್ಯಂತ 500 ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲಿ 137 ಪಬ್ಲಿಕ್ ಶಾಲೆಗಳು ಕಲ್ಯಾಣ ಕರ್ನಾಟಕದಲ್ಲಿಯೇ ಆರಂಭವಾಗಲಿವೆ‘ ಎಂದು 

‘ಪಕ್ಷಭೇದ ಇಲ್ಲದೇ ಪ್ರತಿಯೊಬ್ಬ ಶಾಸಕರ ವ್ಯಾಪ್ತಿಯಲ್ಲಿ ಸರಾಸರಿ ನಾಲ್ಕು ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅಲ್ಲದೇ, ಈ ಶಾಲೆಗಳಲ್ಲಿ ದ್ವಿಭಾಷಾ ಕಲಿಕಾ ಮಾಧ್ಯಮ ಇರಲಿದೆ. ಇದರಿಂದಾಗಿ ಮಕ್ಕಳು ಎಲ್‌ಕೆಜಿಯಿಂದ ಪಿಯುಸಿವರೆಗೆ 14 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಲಿಯಲು ಅವಕಾಶವಾಗಲಿದೆ‘ ಎಂದರು.

‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕ ತೆಗೆದಿರಿಸಬೇಕಾದ ಒತ್ತಡದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಇಲಾಖೆಗೆ ₹ 44,400 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಇಲಾಖೆಗೆ ₹ 37,400 ಕೋಟಿ ಬಂದಿತ್ತು. ಹೆಚ್ಚುವರಿ ಹಣ ಸಿಕ್ಕಿದ್ದರಿಂದ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಉತ್ತಮಪಡಿಸಲಾಗುವುದು’ ಎಂದು ಹೇಳಿದರು.

ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಉತ್ತಮ ತರಬೇತಿ ಹೊಂದಿರುವ, ಮೆರಿಟ್ ಆಧಾರದ ಮೇಲೆ ನೇಮಕಗೊಂಡ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲಿಯೇ. ಅವರಿಗೆ ಇರುವ ಇತರೆ ಕೆಲಸದ ಹೊರೆಯನ್ನು ತಗ್ಗಿಸಿ ಪಾಠ, ಪ್ರವಚನಕ್ಕೆ ಹೆಚ್ಚಿನ ಸಮಯ ನೀಡಲಾಗುವುದು‘ ಎಂದರು.

‘ಸರ್ಕಾರಿ ಶಾಲೆಗಳಿದ್ದರೂ ಇಲ್ಲಿಯವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದ್ದುದರಿಂದ ಕಂಪ್ಯೂಟರ್, ಸ್ಮಾರ್ಟ್‌ಕ್ಲಾಸ್‌ಗಳನ್ನು ಬಳಸಿದರೆ ಹೆಚ್ಚು ವಿದ್ಯುತ್ ಬರಲಿದೆ ಎಂಬ ಭೀತಿಯಿಂದ ಕೆಲವೆಡೆ ಬಳಕೆ ಮಾಡಿರಲಿಲ್ಲ. ವಿದ್ಯುತ್ ಬಿಲ್ ಮನ್ನಾ ಮಾಡಿದ್ದರಿಂದ ಶಾಲೆಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್‌ಗಳ ಬಳಕೆ ಹೆಚ್ಚಲಿದೆ‘ ಎಂದು ಮಧು ಬಂಗಾರಪ್ಪ ತಿಳಿಸಿದರು.

ಶಾಸಕ ಎಂ.ವೈ. ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶಬಾಬು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಭಾಗವಹಿಸಿದ್ದರು.

'ಶಾಲೆ ನಿರ್ವಹಣೆಗೆ ₹ 40 ಸಾವಿರ’
ಶೌಚಾಲಯ ಸೇರಿದಂತೆ ಒಟ್ಟಾರೆ ಶಾಲೆಗಳ ನಿರ್ವಹಣೆಗೆ ವಾರ್ಷಿಕವಾಗಿ ನೀಡುತ್ತಿದ್ದ ನೆರವನ್ನು ₹ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ, ಶಾಲಾ ಶಿಕ್ಷಕರು, ಮಕ್ಕಳು ಪೊರಕೆ ಹಿಡಿದು ಶೌಚಾಲಯ ಸ್ವಚ್ಛ ಮಾಡುವುದು ತಪ್ಪಲಿದೆ ಎಂದರು. ಅನುದಾನವನ್ನು ಶಿಕ್ಷಕರು ಲೇಖನ ಸಾಮಗ್ರಿ ಖರೀದಿಗೂ ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

‘ಶಿಕ್ಷಣಕ್ಕೆ ₹ 652 ಕೋಟಿ ಮೀಸಲು’

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವುದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕೆಕೆಆರ್‌ಡಿಬಿಯು ತನ್ನ ಅನುದಾನದ ಶೇ 25ರಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ₹ 2610 ಕೋಟಿಯಲ್ಲಿ ಶಿಕ್ಷಣಕ್ಕೆ ₹ 652 ಕೋಟಿ ವಿನಿಯೋಗಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.

ಮಂಡಳಿ ಕಲ್ಯಾಣ ಕರ್ನಾಟಕದಲ್ಲಿ 2618 ಶಿಕ್ಷಕರಿಗೆ ವೇತನ ನೀಡುತ್ತಿದ್ದು, ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೇ ಇಲ್ಲವಾಗಿದೆ. ಈ ಭಾಗದಲ್ಲಿ 9249 ಸರ್ಕಾರಿ ಶಾಲೆಗಳಿದ್ದು, ಪ್ರತಿ ವರ್ಷ 50 ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಪಿಯುಸಿ ಓದುತ್ತಿರುವ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ಬರೆಯುವ ನಿಟ್ಟಿನಲ್ಲಿ ತರಬೇತಿ ಆರಂಭಿಸುವ ಚಿಂತನೆ ಇದೆ.
–ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT