ಚಿಂಚೋಳಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ಈ ರಸ್ತೆ ಮಾರ್ಗದಲ್ಲೇ ಓಡಾಡುತ್ತಾರೆ. ಇನ್ನು ಬೀದರ್ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್ ತಾಲ್ಲೂಕುಗಳ ಪ್ರಯಾಣಿಕರಿಗೂ ಇದೇ ಮಾರ್ಗ ಅನುಕೂಲ. ಮಳೆ ಬಂದರೆ ಈ ಸ್ಥಳ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟು ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತದೆ. ಹಗಲು ಹೊತ್ತಿನಲ್ಲಿ ಹೇಗಾದರೂ ಪ್ರಯಾಣಿಸುವ ಜನರು, ರಾತ್ರಿ ವೇಳೆ ಇಲ್ಲದ ತೊಂದರೆಗಳನ್ನು ಅನುಭವಿಸುತ್ತಾರೆ. ಈ ಪರಿಸ್ಥಿತಿ ತಲೆದೋರಿ ಆರು ತಿಂಗಳು ಉರುಳುತ್ತಿದ್ದರೂ ಕಾಮಗಾರಿ ಮಾತ್ರ ಪ್ರಗತಿ ಕಾಣದೆ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.