ಅಪಘಾತ: ಪುಸ್ತಕ ಅಂಗಡಿ ವ್ಯಾಪಾರಿ ಸಾವು

ವಾಡಿ: ಕಲಬುರ್ಗಿ ತಾಲ್ಲೂಕಿನ ನಂದೂರು ಗ್ರಾಮದ ಬಳಿ ಬುಧವಾರ ರಾತ್ರಿ ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಲ್ಲಿನ ಪುಸ್ತಕ ಅಂಗಡಿ ಮಾಲೀಕ ಮೃತಪಟ್ಟಿದ್ದಾರೆ.
ಪಟ್ಟಣದ ಗಾಂಧಿ ವೃತ್ತದಲ್ಲಿನ ಸ್ವಾಮಿ ಬುಕ್ಸ್ಟಾಲ್ ಮಾಲೀಕ ಶರಣಯ್ಯ ಸ್ವಾಮಿ ಸಾಲಿಮಠ (38) ಮೃತಪಟ್ಟವರು. ಬುಧವಾರ ಸಂಜೆ ವ್ಯಾಪಾರ ಮುಗಿಸಿಕೊಂಡು ಕಲಬುರ್ಗಿ ನಗರದ ತಮ್ಮ ಮನೆಗೆ ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಶರಣಯ್ಯ ಸ್ವಾಮಿ ಅವರ ಎರಡೂ ಕಾಲುಗಳು ತುಂಡಾಗಿದ್ದವು. ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟರು. ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.
ಶರಣಯ್ಯ ಸ್ವಾಮಿ ಅವರಿಗೆ ತಂದೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ (ಜುಲೈ 2) ಮಧ್ಯಾಹ್ನ 12ಗಂಟೆಗೆ ನಾಲವಾರದ ಸ್ವಂತ ಹೊಲದಲ್ಲಿ ನೆರವೇರುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.