ಅಫಜಲಪುರ: ಸರ್ಕಾರದ ಬರುವ ಪ್ರತಿಯೊಂದು ಯೋಜನೆಯನ್ನು ಬಡಮಕ್ಕಳಿಗೆ ತಲುಪಿಸಲು ಅಂಗನವಾಡಿ ಕಾರ್ಯಕರ್ತೆಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ ಕುಮಾರ ಹೇಳಿದರು.
ಪುರಸಭೆ ವ್ಯಾಪ್ತಿಗೆ ಬರುವ ದೇಸಾಯಿ ಕಲ್ಲೂರ ತಾಂಡಾದಲ್ಲಿನ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ಇರುವ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಅಂಗನವಾಡಿಗಳಿಗೆ ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಗಳನ್ನು ತಲುಪಿಸಿ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿಯೊಂದು ಮಗುವಿಗೂ ಸಹ ಸರ್ಕಾರದಿಂದ ಬರುವ ಪೌಷ್ಟಿಕಾಂಶ ಆಹಾರ ನೀಡುವ ಮೂಲಕ ಈ ಭಾಗದ ಮಕ್ಕಳ ಸದೃಢ ಬೆಳವಣಿಗೆಗೆ ನೆರವಾಗಬೇಕು ಎಂದರು.
ಸಮಸ್ಯೆ ಇರುವ ಅಂಗನವಾಡಿಗಳಿಗೆ ಫ್ಯಾನ್, ವಿದ್ಯುತ್, ಶೌಚಾಲಯ, ಕಂಪೌಂಡ್, ನೀರಿನ ಸೌಕರ್ಯಗಳನ್ನು ಒದಗಿಸಲಾಗುವುದು. ಸರ್ಕಾರದಿಂದ ಬರುವ ಪೌಷ್ಟಿಕಾಂಶ ಆಹಾರವನ್ನು ತಪ್ಪದೇ ಮಕ್ಕಳಿಗೆ ವಿತರಣೆ ಮಾಡಬೇಕು ಎಂದರು.
ನಂತರ ಶಾಸಕರ ಅನುದಾನದಡಿ ನಿರ್ಮಾಣವಾಗುತ್ತಿರುವ ಗುಡ್ಡೆವಾಡಿ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಪರಿಶೀಲಿಸಿದರು. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ಮಂಜೂರಾಗಿದ್ದು,ಆದಷ್ಟು ಬೇಗನೆ ಕಾಮಗಾರಿಯನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಡ್ಡೆವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಸಮರ್ಪಣ ದಿನದ ನಿಮಿತ್ಯ ಹಮ್ಮಿಕೊಳ್ಳಲಾದ ಸಂವಿಧಾನ ಕುರಿತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೆಕೆಆರ್ಡಿಬಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೊಳ್ಳುರ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪರಿಶೀಲಿಸಿ ಸಮಯ ವ್ಯರ್ಥ ಮಾಡದೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯಾದ ಶಿವಶರಣಪ್ಪ, ಅಫಜಲಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಮ್ಮ ಪಾಟೀಲ್, ಹಿರಿಯ ಮೇಲ್ವಿಚಾರಕಿ ಮೀನಾಕ್ಷಿ ಪಾಟೀಲ್, ವಲಯ ಮೇಲ್ವಿಚಾರಕಿ ಗುರುಬಾಯಿ ಮುದ್ದೇಬಿಹಾಳ, ಅಂಗನವಾಡಿ ಕಾರ್ಯಕರ್ತೆ ಮಹಾದೇವಿ ರಾಠೋಡ ಇದ್ದರು.