ಚಿಂಚೋಳಿ: ಪ್ರಮುಖ ಸಾಂಬಾರು ಪದಾರ್ಥ ಅಜವಾನ ಕೃಷಿಯಲ್ಲಿ ತೊಡಗಿರುವ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಪ್ರಗತಿಪರ ರೈತ ವಿಜಯಕುಮಾರ ಪಾಟೀಲ, ನಿರಂತರ ಹಾಗೂ ಉತ್ತಮ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಕುಮಾರ ಅವರು, ಒಂದೂವರೆ ದಶಕದಿಂದ ಪ್ರತಿವರ್ಷ ಅಜವಾನ ಕೃಷಿ ಮಾಡುತ್ತಿದ್ದಾರೆ. ಕ್ವಿಂಟಲ್ಗೆ ಕನಿಷ್ಠ ₹ 8 ಸಾವಿರದಿಂದ ₹ 17ಸಾವಿರದವರೆಗೆ ಉತ್ಪನ್ನ ಮಾರಾಟವಾಗುತ್ತದೆ. ಅಜವಾನವು, ಸಾಂಬಾರು ಪದಾರ್ಥ ಹಾಗೂ ಬೆಳೆಯುವವರ ಸಂಖ್ಯೆ ಕಡಿಮೆ ಇರುವುದರಿಂದ ಬೆಲೆ ಕುಸಿತದ ಭೀತಿಯೂ ಇಲ್ಲ. ಹೀಗಾಗಿ ಅವರು ನಿರಂತರವಾಗಿ ಲಾಭದಾಯಕ ಕೃಷಿಕರಾಗಿದ್ದಾರೆ.
ಪ್ರಸಕ್ತ ವರ್ಷ ಮೂರುವರೆ ಎಕರೆಯಲ್ಲಿ ಅಜವಾನ ಬೇಸಾಯ ನಡೆಸುತ್ತಿದ್ದು, ಎಕರೆಗೆ ಕನಿಷ್ಠ ₹ 15 ಸಾವಿರಕ್ಕೂ ಅಧಿಕ ಖರ್ಚು ಬಂದಿದೆ. ಹೊಲವನ್ನು ಹದಗೊಳಿಸಿ ಬೀಜ ತಂದು ಚೆಲ್ಲಿ ಕಳೆ ನಿಯಂತ್ರಣ ಹಾಗೂ ರೋಗರುಜಿನಗಳಿಂದ ಬೆಳೆ ನಿರ್ವಹಣೆಯಲ್ಲಿ ತೊಡಗಿದ್ದಾರೆ.
ಸದ್ಯ ಹೂವಾಡುವ ಮತ್ತು ಕಾಳು ಕಟ್ಟುವ ಹಂತದಲ್ಲಿರುವ ಈ ಬೆಳೆ ಒಂದು ತಿಂಗಳ ನಂತರ ಕೊಯ್ಲಿಗೆ ಬರಲಿದೆ. ಪ್ರಸಕ್ತ ವರ್ಷ ಎಕರೆಗೆ 5 ಕ್ವಿಂಟಲ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ನೀರಾವರಿ ಸೌಲಭ್ಯವಿದ್ದರೆ ಎಕರೆಗೆ ಏಳು ಕ್ವಿಂಟಲ್ವರೆಗೆ ಇಳುವರಿ ಪಡೆಯಬಹುದು ಎಂಬುದು ಅವರ ಅನಿಸಿಕೆಯಾಗಿದೆ.
ಅಂದಾಜು 130ರಿಂದ 140 ದಿನಗಳ ಅವಧಿಯ ಅಜವಾನ ಬೀಜ ಭೂಮಿಗೆ ಹಾಕಲು ಆಗಸ್ಟ್-ಸೆಪ್ಟೆಂಬರ್ ಪ್ರಶಸ್ತ ಕಾಲವಾಗಿದ್ದು, ಇದಕ್ಕೆ ಮುಂಗಾರು ಮತ್ತು ಹಿಂಗಾರಿನ ಮಧ್ಯದ ಕಾಲದ ಹವಾಮಾನ ಪೂರಕವಾಗಿದೆ. ಈ ವರ್ಷ ಕ್ವಿಂಟಲ್ಗೆ ₹ 12ರಿಂದ ₹ 15ಸಾವಿರ ದರವಿದ್ದು ಕನಿಷ್ಠ 12 ಸಾವಿರ ದರದಲ್ಲಿ ಮಾರಾಟವಾಗುವ ವಿಶ್ವಾಸದಲ್ಲಿ ಬೆಳೆಗಾರರಿದ್ದಾರೆ.
ತೆಲಂಗಾಣದ ವಿಕಾರಾಬಾದ ಜಿಲ್ಲೆಯಲ್ಲಿ ಅಜವಾನ ಬೇಸಾಯ ಹೆಚ್ಚಾಗಿ ನಡೆಸುವುದು ವಾಡಿಕೆ. ಆದರೆ ಪ್ರಸಕ್ತ ವರ್ಷ ಅಲ್ಲಿ ಮೆಕ್ಕೆ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯ ನಡೆಸಿದ್ದರಿಂದ ಅಜವಾನ ಬೇಸಾಯ ಪ್ರದೇಶ ಕ್ಷೀಣಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಧಿಕ ದರ ದೊರೆಯುವ ಆಶಾವಾದ ಬೆಳೆಗಾರರದ್ದು.
ಅಜವಾನ ಮಾರಾಟಕ್ಕೆ ಮಾರುಕಟ್ಟೆಯೂ ವಿಕಾರಾಬಾದಲ್ಲಿಯೇ ಇದೆ. ಪ್ರಸಕ್ತ ವರ್ಷ ಹವಾಮಾನ ವೈಪರೀತ್ಯದಿಂದ ಬೆಳೆಯ ನಿರ್ವಹಣೆಗೆ ಅಧಿಕ ಖರ್ಚು ಬಂದಿದೆ. ಪ್ರತಿಕೂಲ ವಾತಾವರಣವೇ ಇದಕ್ಕೆ ಕಾರಣ ಎನ್ನುತ್ತಾರೆ ವಿಜಯಕುಮಾರ ಪಾಟೀಲ.
ನಾನು ನಮ್ಮ ಹೊಲದಲ್ಲಿ ಅಜವಾನ ಬೆಳೆಯಲು ಎರಡು ಬಾರಿ ಬೀಜ ಹಾಕಿದ್ದೇನೆ. ಮಳೆಯಿಂದ ಮೊಳಕೆ ಬರಲಿಲ್ಲ. ಮೂರನೇ ಬಾರಿಗೆ ಹಾಕಿದಾಗ ಮೊಳಕೆ ಬಂದಿದೆ ಎನ್ನುತ್ತಾರೆ ಕುಪೇಂದ್ರ ಬಡಿಗೇರ.
(ವಿಜಯಕುಮಾರ ಪಾಟೀಲ ಸಂಪರ್ಕ ಸಂಖ್ಯೆ: 9008312102).
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜವಾನ ಘಮಲು ವಿಕಾರಾಬಾದ ಜಿಲ್ಲೆಯಲ್ಲಿ ಕ್ಷೀಣಿಸಿದ ಬೇಸಾಯ ಬರಗಾಲದಲ್ಲೂ ಸಾಂಬಾರು ಪದಾರ್ಥ ಬೆಳೆದ ರೈತ
ರೈತರು ವರ್ಷದಲ್ಲಿ ಬೇರೆ ಬೇರೆ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ದರವೂ ಸಿಗುತ್ತದೆ ಜತೆಗೆ ಜಮೀನಿನ ಫಲವತ್ತತೆಯೂ ವೃದ್ಧಿಸುತ್ತದೆ– ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕ ಚಿಂಚೋಳಿ
ಅಜವಾನ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು ಪ್ರಗತಿಪರ ರೈತ ವಿಜಯಕುಮಾರ ಪಾಟೀಲರು 15 ವರ್ಷದಿಂದ ನಿರಂತರವಾಗಿ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ– ನೆಲ್ಲಿ ಮಲ್ಲಿಕಾರ್ಜುನ ಕೃಷಿಕ ನಾಗಾಈದಲಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.