ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ಡಾ.ಬಿ.ಅರ್. ಅಂಬೇಡ್ಕರ್ ಧ್ವಜ ಕಟ್ಟೆಯ ಮೇಲಿರುವ ಅಂಬೇಡ್ಕರ್ ಭಾವಚಿತ್ರ ಇರುವ ಬೋರ್ಡಿನ ಮೇಲೆ ಚಪ್ಪಲಿ ಇಟ್ಟು ಅವಮಾನಿಸಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಕಾಗಿಣಾ ನದಿ ದಂಡೆಯ ಮೇಲಿರುವ ಧ್ವಜಕಟ್ಟೆಯಲ್ಲಿ ಚಪ್ಪಲಿ ಇಟ್ಟ ಬೆಳಕಿಗೆ ಬರುತ್ತಿದ್ದಂತೆ ಸುದ್ದಿ ತಿಳಿದ ದಲಿತ ಸಮುದಾಯದ ನೂರಾರು ಸಂಖ್ಯೆಯಲ್ಲಿ ಜನರು, ಮಹಿಳೆಯರು ಘಟನಾ ಸ್ಥಳಕ್ಕಾಗಮಿಸಿ ಆಕ್ರೋಶ ವ್ಯಕ್ತ ಮಾಡಿದರು.
ಮುಖ್ಯ ರಸ್ತೆಯ ಮೇಲೆ ಕುಳಿತು ಮಹಿಳೆಯರು ಘೋಷಣೆ ಕೂಗಿದರು. ವಾಹನ ಸಂಚಾರ ತಡೆದು ಆರೋಪಿಗಳ ಪತ್ತೆ ಮಾಡಿ, ಬಂಧಿಸಿ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಶಹಾಬಾದ್ ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ಐ ಶ್ರೀಶೈಲ ಅಂಬಾಟಿ, ವಾಡಿ ಪಿಎಸ್ಐ ವಿಜಯಕುಮಾರ ಅವರು ಪರಿಶೀಲನೆ ನಡೆಸಿದರು.
ಕೃತ್ಯ ಎಸಗಿದ ಆರೋಪಿಗಳ ಪತ್ತೆಗೆ ಕಲಬುರ್ಗಿಯಿಂದ ಪೊಲೀಸ್ ಶ್ವಾನದಳ ಕರೆಯಿಸಿ ತಪಾಸಣೆ ಮಾಡಲಾಯಿತು.
ಘಟನಾ ಸ್ಥಳದಿಂದ ಊರಲ್ಲಿ ಸುತ್ತಾಡಿದ ಶ್ವಾನವು ಮತ್ತೆ ಅದೇ ಘಟನಾ ಸ್ಥಳಕ್ಕೆ ಬಂದು ನಿಂತಿತು.
ದಲಿತ ಮುಖಂಡರಾದ ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸಮನಿ, ಜಿ.ಪಂ ಸದಸ್ಯ ಶಿವರುದ್ರ ಭೀಣಿ ಅವರು ಆಗಮಿಸಿ ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ವಾರದೊಳಗೆ ಆರೋಪಿಗಳ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ಪಿ ಕೆ.ಬಸವರಾಜ ಅವರು ಹೇಳಿದರು.
ಅಧಿಕಾರಿಗಳು ಮತ್ತು ಮುಖಂಡರು ಡಾ.ಅಂಬೇಡ್ಕರ್ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಮಾಲಾರ್ಪಣೆ ಮಾಡಿದರು