ಕಲಬುರ್ಗಿ: ಲಾಕ್ಡೌನ್ ತೆರವುಗೊಂಡ ಬಳಿಕವೂ ಇಲ್ಲಿನ ಎಪಿಎಂಸಿ ಆವರಣದಲ್ಲಿ ಪೂರ್ಣ ಪ್ರಮಾಣದ ವ್ಯವಹಾರ ಆರಂಭವಾಗಿಲ್ಲ. ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿನ ರೈತರು, ವರ್ತಕರು ಇನ್ನೂ ಮಾರುಕಟ್ಟೆಗೆ ಬರುತ್ತಿಲ್ಲ.
ಲಾಕ್ಡೌನ್ ತೆರವುಗೊಂಡ ಮೊದಲ ದಿನ 440 ಕ್ವಿಂಟಲ್ನಷ್ಟು ತೊಗರಿ ಮಾರಾಟವಾಗಿದೆ. ಆದರೆ, ಕನಿಷ್ಠ 1000 ಕ್ವಿಂಟಲ್ ತೊಗರಿ ಮಾರಾಟ ನಡೆಯುವುದು ರೂಢಿ.
ಮಾರುಕಟ್ಟೆ ಸ್ಥಿತಿ–ಗತಿ ಅರಿಯಲು ಸೋಮವಾರ ಇಲ್ಲಿಗೆ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿಗೆ ಅಲ್ಲಲ್ಲಿ ಬಿರುಸಿನ ವ್ಯಾಪಾರ ಕಂಡುಬಂತು. ಕೆಲವು ದಿನಗಳಿಂದ ಬಿಕೋ ಎನ್ನುತ್ತಿದ್ದ ಜಾಗದಲ್ಲಿ ಈಗ ಚಟುವಟಿಕೆಗಳು ಆರಂಭ
ವಾಗಿವೆ. ಇಡೀ ಪ್ರಾಂಗಣದಲ್ಲಿ ತೊಗರಿ, ಹೆಸರು, ಅಕ್ಕಿ ತುಂಬಿದ ವಾಹನಗಳು ಓಡಾಡುತ್ತಿವೆ. ರೈತರು, ಹಮಾಲರು, ತೂಕದವರು, ದಾಲ್ಮಿಲ್ ಮಾಲೀಕರು, ದಲಾಲರು, ಕಾರ್ಮಿಕರು ಲಗುಬಗೆಯಿಂದ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ.
ರೂಢಿ ಪ್ರಕಾರ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ದಿನ ಕನಿಷ್ಠ 1000 ಕ್ವಿಂಟಲ್ ತೊಗರಿ ಮಾರಾಟವಾಗಬೇಕು. ಏಪ್ರಿಲ್ ಮೊದಲ ವಾರದವರೆಗೂ 1000ರಿಂದ 1200 ಕ್ವಿಂಟಲ್ ಪ್ರತಿ ದಿನ ಬಿಕರಿಯಾಗಿದೆ. ಸರ್ಕಾರಿ ಬಸ್ ಸಂಚಾರಕ್ಕಾಗಿಯೂ ಹಲವು ರೈತರು ಕಾಯುತ್ತಿದ್ದಾರೆ. ಅಪಾರ ಪ್ರಮಾಣದ ತೊಗರಿಯನ್ನು ನಾಲ್ಕು ತಿಂಗಳ ಹಿಂದೆಯೇ ಇಟ್ಟು ಹೋಗಿದ್ದಾರೆ. ಆದರೂ ‘ರೇಟ್’ ಮಾಡುವು
ದಕ್ಕೆ ಮುಂದೆ ಬರುತ್ತಿಲ್ಲ. ಬಸ್ ಆರಂಭವಾದರೆ ಸಹಜವಾಗಿಯೇ ವ್ಯಾಪಾರ ಹೆಚ್ಚಲಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಹೇಳಿಕೆ.
ಒಂದೇ ದಿನಕ್ಕೆ ₹ 200 ಏರಿಕೆ: ಜೂನ್ 13ರವರೆಗೂ ಕ್ವಿಂಟಲ್ ತೊಗರಿಗೆ ₹ 6,100 ದರ ಇತ್ತು. ಜೂನ್ 14ರಿಂದ ಒಂದೇ ದಿನಕ್ಕೆ ₹ 200 ಏರಿಕೆಯಾಗಿದೆ. ರೈತರಿಗೆ ಈಗ ಪ್ರತಿ ಕ್ವಿಂಟಲ್ಗೆ ₹ 6,300ರಿಂದ ₹ 6,500ರವರೆಗೆ ದರ ಸಿಗುತ್ತಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ₹ 6,300 ಘೋಷಣೆ ಮಾಡಿದೆ. ಅದಕ್ಕಿಂತ ಉತ್ತಮ ದರ ಮಾರುಕಟ್ಟೆಯಲ್ಲೇ ಸಿಗುತ್ತಿರುವ ಕಾರಣ ಹೆಚ್ಚಿನ ರೈತರು ಇಲ್ಲಿಗೇ ತರುತ್ತಿದ್ದಾರೆ. ಚಿತ್ತಾಪುರ, ಕಾಳಗಿ, ಸೇಡಂ, ಚಿಂಚೋಳಿ ತಾಲ್ಲೂಕಿನ ರೈತರೇ ಸೋಮವಾರ ಹೆಚ್ಚಾಗಿ ಇದ್ದರು. ಹೆಸರು, ಉದ್ದು, ಕಡಲೆ ಮಾರಾಟದಲ್ಲಂತೂ ಕಾಳಗಿ ತಾಲ್ಲೂಕಿನವರೇ ಹೆಚ್ಚಾಗಿದ್ದುದು ಕಂಡುಬಂತು.
‘ರೈತರಿಗೆ ಅನುಕೂಲಕರ ವಾತಾವರಣ’
ಮಾರುಕಟ್ಟೆ ಪ್ರಾಂಗಣದಲ್ಲಿ ಈಗ ಮಧ್ಯಾಹ್ನ 2ರವರೆಗೆ ಮಾತ್ರ ಅವಕಾಶವಿದೆ. ಆದರೆ, ತೂಕ ಮಾಡುವುದು, ಚೀಲ ಹೊಲಿಯುವುದು, ಲೋಡಿಂಗ್, ಅನ್ಲೋಡಿಂಗ್, ದರ ಹೊಂದಾಣಿಕೆ ಮುಂತಾದ ಕೆಲಸಗಳು ನಂತರವೂ ನಡೆಯುವುದು ಅನಿವಾರ್ಯ. ದಲಾಲರು ಅಂಗಡಿಗಳ ಬಾಗಿಲು ಹಾಕಿಕೊಂಡು ಒಳಗಡೆಯೇ ಕೆಲಸ ಮಾಡಲು ಸೂಚಿಸಲಾಗಿದೆ. ತೊಗರಿ ಸಂಗ್ರಹಕ್ಕೂ ಇನ್ನೂ ಸಾಕಷ್ಟು ಸ್ಥಳಾವಕಾಶವಿದೆ. ರೈತರು ಗೊಂದಲ ಪಡಬೇಕಿಲ್ಲ. –ಎಂ.ವಿ.ಶೈಲಜಾ, ಕಾರ್ಯದರ್ಶಿ, ಎಪಿಎಂಸಿ
*
‘ದರ ಕಡಿಮೆ’
ಕಳೆದ ವರ್ಷವೂ ಇದೇ ತೊಗರಿಗೆ ₹ 6,000 ದರ ಕೊಟ್ಟಿದ್ದರು. ಈ ವರ್ಷ ₹ 6,100ದಿಂದ ₹ 6300ಕ್ಕೆ ಹೋಗುತ್ತಿದೆ. ಲಾಕ್ಡೌನ್ ಕಾರಣ ದರ ಅಷ್ಟಾಗಿ ಸುಧಾರಿಸಲಿಲ್ಲ. ಇಲ್ಲದಿದ್ದರೆ ಈ ವೇಳೆಗೆ ₹ 7000ರಷ್ಟು ಸಿಗಬೇಕಿತ್ತು.
ಭೀಮಪ್ಪ, ನಂದಿಕೂರ ರೈತ
‘ದರ ಸ್ಪರ್ಧೆ ಇಲ್ಲ’
ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಉತ್ತಮ ದರ ಸಿಗುತ್ತದೆ. ಆದರೆ, ಈಗ ಹೊರರಾಜ್ಯಗಳಿಗೆ ‘ಮಾಲ್’ ಹೋಗುವುದೇ ಕಡಿಮೆಯಾಗಿದೆ. ತಿಂಗಳಾನುಗಟ್ಟಲೇ ಕಾದುಕಾದು ಸಾಕಾಗಿದೆ. ಈಗ ಮಾರುವುದು ಅನಿವಾರ್ಯವಾದ್ದರಿಂದ ಮಾರುಕಟ್ಟೆಗೆ ಬಂದಿದ್ದೇನೆ.
ಬಸವರಾಜ, ರೇವೂರ ಗ್ರಾಮದ ರೈತ
‘ದಿನವಿಡೀ ಬೇಕು’
ಅರ್ಧ ದಿನದಲ್ಲಿ ವ್ಯಾಪಾರ ಕುದುರುವುದಿಲ್ಲ. ವರ್ಷವಿಡೀ ದುಡಿದು ತೆಗೆದ ಉತ್ಪನ್ನವನ್ನು ತರಾತುರಿಯಲ್ಲಿ ಕೊಟ್ಟು ಹೋಗುವುದೂ ಸಾಧ್ಯವಿಲ್ಲ. ಇಡೀ ದಿನ ಅವಕಾಶ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ.
ಕಾಶಿನಾಥ, ಲೇಂಗಟಿ ರೈತ
‘ಹೊಟ್ಟಿ–ನೆತ್ತಿಗೆ ಬರ’
ಮೂರು ತಿಂಗಳಿಂದ ಏನೂ ಕೆಲಸವಿಲ್ಲದೇ ಖಾಲಿ ಕುಳಿತಿದ್ದೇವೆ. ದುಡಿದರೂ ಹೊಟ್ಟೆ ತುಂಬದ ಇಂಥ ದಿನಗಳಲ್ಲಿ ಖಾಲಿ ಕುಳಿತರೆ ಏನು ಸಿಗುತ್ತದೆ? ಮಾರ್ಕೆಟ್ ನಂಬಿಕೊಂಡೇ 30 ವರ್ಷಗಳಿಂದ ಬದುಕುತ್ತಿದ್ದೇವೆ. ಈ ವರ್ಷ ಇನ್ನೂ ವ್ಯಾಪಾರ ಸರಿಯಾಗಿ ನಡೆಯದ ಕಾರಣ ತೀವ್ರ ಕಷ್ಟವಾಗುತ್ತಿದೆ.
ಭಾಗಮ್ಮ ಕಲ್ಲೂರ, ಕಾರ್ಮಿಕರು
‘ಹೆಚ್ಚಿನ ಲಾಭವಿಲ್ಲ’
ತೊಗರಿ ಬೇಳೆ ಗರಿಷ್ಠ ₹ 9,200ರಿಂದ ಕನಿಷ್ಠ ₹ 6,000ರಂತೆ ಸಿಗುತ್ತಿದೆ. ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಕಡೆಗೆ ಹೋಗುತ್ತಿದ್ದ ಬೇಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ, ದಾಲ್ಮಿಲ್ಗಳಿಗೂ ಹೆಚ್ಚಿನ ಲಾಭವೇನೂ ಸಿಗುತ್ತಿಲ್ಲ.
ಚಂದ್ರಕಾಂತ ಶಣಶೆಟ್ಟಿ, ದಾಲ್ಮಿಲ್ ಮಾಲೀಕ
‘ದಲಾಲಿ ಕೆಲಸವೂ ನಿಷ್ಕ್ರಿಯ’
ರೈತರು ದರ ಮಾಡಲು ಮುಂದೆ ಬರದ ಕಾರಣ ದಲಾಲಿ ಅಂಗಡಿಗಳಲ್ಲಿ ‘ನೊಣ ಹೊಡೆಯುವ’ ಸ್ಥಿತಿ ಇದೆ. ಈ ಹಿಂದಿನ ಯಾವ ವರ್ಷವೂ ವ್ಯಾಪಾರದಲ್ಲಿ ಇಷ್ಟೊಂದು ನಿರಾಸಕ್ತಿ ಇರಲಿಲ್ಲ. ವ್ಯಾಪಾರ ಇಲ್ಲದಿದ್ದರೂ ಕಾರ್ಮಿಕರಿಗೆ ಸಂಬಳ ಕೊಡಲೇಬೇಕು.
ರವೀಂದ್ರ ಸುಲೇಪೇಟ, ದಲಾಲ್ ಅಂಗಡಿ ಮಾಲೀಕ
*
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.