ಕಲಬುರಗಿ: ‘ಕಲಾವಿದರ ಕುಂಚದಿಂದ ಮೂಡಿರುವ ಚಿತ್ರಕಲೆಗಳು ಸಮಾಜದ ವಿಭಿನ್ನ ಸಂಗತಿಗಳನ್ನು ವಿವರಿಸುವುದಷ್ಟೇ ಅಲ್ಲದೇ ವಿಭಿನ್ನ ಭಾವಲೋಕಕ್ಕೆ ಸೆಳೆಯುತ್ತವೆ. ಕಲಾ ಪೋಷಕರ ಪ್ರೋತ್ಸಾಹದಿಂದ ದೃಶ್ಯಕಲಾ ಕ್ಷೇತ್ರ ಸಾಕಷ್ಟು ಬೆಳೆದಿದೆ. ಕಲಾವಿದರ ಕಲ್ಪನೆಯ ಚಿತ್ರಕೃತಿಗಳು ಸಮಾಜವನ್ನು ಸದಾ ಜಾಗೃತ ಮತ್ತು ಜೀವಂತವಾಗಿರಿಸುತ್ತವೆ ಎಂಬುದಕ್ಕೆ ಚಿತ್ರಗಳಲ್ಲಿನ ಭಾವನೆಗಳ ಅನನ್ಯತೆ ಕಾರಣ’ ಎಂದು ಹಿರಿಯ ಚಿತ್ರ ಕಲಾವಿದ ಬಸವರಾಜ ರೇ. ಉಪ್ಪಿನ ಅಭಿಪ್ರಾಯಪಟ್ಟರು.
ನಗರದ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿ.ಬಿ.ಬಿರಾದಾರ ಕಲಾ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಮಾನಕರ ಬಡಾವಣೆಯ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಲಿಯೊನಾರ್ಡೊ ಡಾ ವಿಂಚಿ ಜನ್ಮದಿನದ ಅಂಗವಾಗಿ ವಿಶ್ವ ದೃಶ್ಯಕಲಾ ದಿನಾಚರಣೆ ಹಾಗೂ ಹಿರಿಯ ಕಲಾವಿದರಾದ ವಿ.ಬಿ. ಬಿರಾದಾರ ಅವರ ನಿಸರ್ಗ ಚಿತ್ರಗಳ ಪ್ರದರ್ಶನ ಮತ್ತು ಬಸವರಾಜ ಎಲ್. ಜಾನೆ ಅವರಿಂದ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ್ ಎಲ್.ಜಾನೆ ಮಾತನಾಡಿ, ‘ಚಿತ್ರಕಲಾ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಉತ್ತಮ ಸಂದೇಶಗಳ ಚಿತ್ರಗಳನ್ನು ಬಿಡಿಸಲು ಸಾಧ್ಯ. ಸಮಕಾಲೀನ ಸಂದರ್ಭ ಮತ್ತು ಸನ್ನಿವೇಶಗಳ ಕುರಿತು ಚಿತ್ರಗಳ ನೋಡುಗರಿಗೆ ಮನಸ್ಪರ್ಶಿಸುವಂತಹ ಚಿತ್ರಗಳು ರೂಪಗೊಳ್ಳುತ್ತವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಜೆ.ಎಸ್. ಖಂಡೇರಾವ್, ‘ಚಿತ್ರ ಕಲಾಕ್ಷೇತ್ರ ಅಭಿವೃದ್ಧಿ ಸಾಧಿಸಲು ಲಿಯೋನಾರ್ಡೊ ಡಾ ವಿಂಚಿಯವರ ಸ್ಪೂರ್ತಿಯೇ ಕಾರಣ. ಚಿತ್ರಕಲೆ, ದೃಶ್ಯಕಲೆ, ಪೇಂಟಿಂಗ್ ಕ್ಷೇತ್ರದಲ್ಲಿ ಆಸಕ್ತಿಯಿರುವ ಕಲಾವಿದರು ಸಮಯ ಪ್ರಜ್ಞೆ ಮತ್ತು ಸೃಜನಶೀಲ ಮನಸಿನಿಂದ ಪ್ರಾಯೋಗಿಕತೆಗೆ ಒಗ್ಗಿಕೊಂಡರೆ ಅತ್ಯುತ್ತಮ ಸಾಧಕನಾಗಲು ಸಾಧ್ಯವಿದೆ’ ಎಂದರು.
ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ, ವಿ.ಬಿ. ಬಿರಾದಾರ್ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಬಿ. ಬಿರಾದಾರ ಮಾತನಾಡಿದರು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಪಿ. ಪರಶುರಾಮ ಕಾರ್ಯಕ್ರಮ ನಿರ್ವಹಿಸಿದರು. ಮಲ್ಲಿಕಾರ್ಜುನ ಕೋರಳ್ಳಿ ವಂದಿಸಿದರು. ಎಚ್.ಎಸ್. ಬಸವಪ್ರಭು, ಸಂಗಯ್ಯ ಹಳ್ಳದಮಠ್, ಮೋಹನ್ ಸೀತನೂರ್, ಡಾ. ಮಾನಯ್ಯ ಬಡಿಗೇರ್, ಬಾಬುರಾವ್ ಹೆಚ್. ಅಂಬಾರಾಯ ಚಿನ್ಮಳ್ಳಿ, ಮಂಜುಳಾ ಜಾನೆ, ಶಾಂತಲಾ ನಿಷ್ಠಿ, ಮೀನಾಕ್ಷಿ ಗುತ್ತೇದಾರ, ಲಕ್ಷ್ಮಿಕಾಂತ ಮನೂಕರ್, ಸಿದ್ದು ಮರಗೋಳ, ಜಗದೀಶ್ ಕಾಂಬಳೆ, ಕೆ.ಎಂ. ಕುಮಾರಸ್ವಾಮಿ, ಗೋಪಾಲ್ ಕೆ.ಪಿ. ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.