ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಮನೆ ಕಳ್ಳತನಕ್ಕೆ ಬಂದ ಕಳ್ಳನನ್ನು ನೋಡಿ ಚೀರಿದ ಅಜ್ಜಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ನಡೆದಿದೆ.
ಗುಂಡಮ್ಮ ಲಾಲಪ್ಪ ಭೂತಪಳ್ಳಿ (75) ಗಾಯಗೊಂಡವರು. ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರಿಂದ ಅವರ ಕತ್ತಿನ ಭಾಗದಲ್ಲಿ ಗಾಯವಾಗಿದ್ದು, ರಕ್ತ ಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಗುಂಡಮ್ಮ ಅವರನ್ನು ರಾತ್ರಿ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಕಲಬುರ್ಗಿಯ ಜಿಮ್ಸ್ ಗೆ ದಾಖಲಿಸಲಾಯಿತು. ಘಟನಾ ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಅಜ್ಜಿ ಕಿವಿ ಮತ್ತು ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡಿದ್ದರಿಂದ ಅನಾಹುತ ತಪ್ಪಿದೆ. ಇಲ್ಲದಿದ್ದರೆ, ಪರಿಸ್ಥಿತಿಯೇ ಬೇರೆಯಾಗುತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಚೆಗೆ ತಾಲ್ಲೂಕಿನ ನಾಗಾಯಿದಲಾಯಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನವಾಗಿದ್ದು ಜನರಲ್ಲಿ ಭೀತಿ ಮೂಡಿದೆ.