ಕಲಬುರ್ಗಿ: ಕಲಬುರ್ಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆ ಸುರಿದಿದ್ದು, ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.
ಫತ್ರುಸಾಬ್ ಅಲ್ಲಾವುದ್ದೀನ್ ಗುಂಡಗುರ್ತಿ ಎಂಬುವವರ ತೊನಸನಹಳ್ಳಿ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಗಳೆ ಹೊಡೆಯುತ್ತಿದ್ದಾಗ ಮಳೆ ಬರಲಾರಂಭಿಸಿತು. ಈ ಸಂದರ್ಭದಲ್ಲಿ ಸಿಡಿಲಿನ ಹೊಡೆತಕ್ಕೆ ಒಂದು ಎತ್ತು ಸ್ಥಳದಲ್ಲೇ ಜೀವ ಬಿಟ್ಟಿದೆ. ಮೃತ ಎತ್ತಿನ ಬೆಲೆ ಅಂದಾಜು ₹ 1 ಲಕ್ಷ ಇದೆ ಎಂದು ರೈತ ತಿಳಿಸಿದ್ದಾರೆ.
ಆಳಂದ ಹಾಗೂ ಚಿತ್ತಾಪುರ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯಿತು.
ಮಳೆಯ ಅಬ್ಬರಕ್ಕೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವಡಗಾಂವದಲ್ಲಿ ರೈತ ಝರೆಪ್ಪ ಅವರ ಹೊಲದಲ್ಲಿನ ಪಪ್ಪಾಯಿ ಗಿಡಗಳು ನೆಲಕ್ಕುರುಳಿವೆ. ಬೀದರ್ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 15 ನಿಮಿಷ ಮಳೆಯಾಗಿದೆ. ಭಾಲ್ಕಿ, ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.