ಕಲಬುರ್ಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ (ಜೂನ್ 22) ಮಾಡಲಿರುವ ತಾಲ್ಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಸಿದ್ಧತೆಗಳು ತರಾತುರಿಯಲ್ಲಿ ನಡೆದಿವೆ.
ಈ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಅಂಗನವಾಡಿ ಕೇಂದ್ರ, ಶಾಲೆ, ಉಪ ಆರೋಗ್ಯ ಕೇಂದ್ರ ಮುಂತಾದ ಕಟ್ಟಡಗಳಿಗೆ ಬಣ್ಣ ಬಳಿದು ಹೊಳಪು ನೀಡಲಾಗಿದೆ. ಮುಖ್ಯರಸ್ತೆ ಹಾಗೂ ಗ್ರಾಮದ ಮುಂಬಾಗಿಲಲ್ಲಿ ಸ್ವಾಗತ ಕಾಮಾನು ನಿರ್ಮಿಸಲಾಗಿದೆ.
ಜನತಾ ದರ್ಶನಕ್ಕಾಗಿ ಗ್ರಾಮದ ಹೊರವಲಯದಲ್ಲಿ ಬೃಹತ್ ಶಾಮಿಯಾನ ಹಾಕಿದ್ದು, 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಕುಮಾರಸ್ವಾಮಿ ಮಲಗುವ ಶಾಲೆಯನ್ನು ತಳಿರು– ತೋರಣಗಳಿಂದ ಅಲಂಕರಿಸಲಾಗಿದೆ.
ಮುಖ್ಯರಸ್ತೆಗೆ ಹೊಂದಿಕೊಂಡ ಫರಹತಾಬಾದ್ನಿಂದ ಹೇರೂರ (ಬಿ)ವರೆಗಿನ 27 ಕಿ.ಮೀ ರಸ್ತೆಯನ್ನು ಅಗೆದು ಹಾಕಿದ್ದಾರೆ. ಕಲ್ಲು– ಮಣ್ಣು ಹಾಕಿ ರಸ್ತೆ ಸಮತಟ್ಟು ಮಾಡುವ ಕೆಲಸ ಶುಕ್ರವಾರವೂ ನಡೆದಿತ್ತು. ಈ ಮಣ್ಣಿನ ರಸ್ತೆಯಲ್ಲೇ ಮುಖ್ಯಮಂತ್ರಿ ಸಂಚರಿಸುವುದು ಅನಿವಾರ್ಯವಾಗಿದೆ.