ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಾಜ್‌ಗೆ ಅಡ್ಡಿಯಾಗದ ಕೊರೊನಾ ಭೀತಿ

ಎಲ್ಲೆಡೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ; ಕೆಬಿಎನ್‌ ದರ್ಗಾದಲ್ಲಿ ಸೋಂಕಿನ ಕುರಿತು ತಿಳಿವಳಿಕೆ
Last Updated 14 ಮಾರ್ಚ್ 2020, 9:55 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ನಿವಾಸಿ, ಸೌದಿ ಅರೇಬಿಯಾದಿಂದ ವಾಪಸ್ಸಾಗಿದ್ದ ವೃದ್ಧ ಮಹ್ಮದ್‌ ಸಿದ್ಧಿಕಿ ಅವರು ಕೋವಿಡ್‌– 19 ಸೋಂಕಿನಿಂದ ಮೃತಪಟ್ಟಿರುವ ಬೆನ್ನಲ್ಲೇ ಜಿಲ್ಲಾಡಳಿತವು ನಗರದಾದ್ಯಂತ ಎಲ್ಲ ಮಾಲ್‌, ಸಾರ್ವಜನಿಕ ಉದ್ಯಾನವನಗಳನ್ನು ಬಂದ್‌ ಮಾಡಿದೆ. ಶಾಲಾ, ಕಾಲೇಜುಗಳಿಗೂ ರಜೆ ಘೋಷಿಸಿದೆ.

ಕೊರೊನಾ ಭೀತಿಯ ಮಧ್ಯೆಯೂ ನಗರದಲ್ಲಿ ಶುಕ್ರವಾರ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಗರದ ಖಾಜಾ ಬಂದಾ ನವಾಜ್‌ ದರ್ಗಾ, ಮುಸ್ಲಿಂ ಚೌಕ್‌, ಸೂಪರ್‌ ಮಾರ್ಕೆಟ್, ನೆಹರೂ ಗಂಜ್‌ ಬಳಿ ಇರುವ ಮಸೀದಿಗಳಲ್ಲಿಯೂ ನಮಾಜ್‌ ಸಾಂಗವಾಗಿ ನಡೆಯಿತು. ‘ಯಾವ ಸೋಂಕು ಬಂದರೇನು. ಮೇಲೆ ಇರುವ ಖುದಾ (ಅಲ್ಲಾಹ್) ನಮ್ಮನ್ನು ಕಾಯುತ್ತಾನೆ’ ಎಂದು ಕೆಬಿಎನ್‌ ದರ್ಗಾ ಬಳಿ ನಿಂತಿದ್ದ ಮೊಹಮ್ಮದ್‌ ಯೂಸುಸ್‌ ಹೇಳಿದರು.

ದರ್ಗಾದ ಮೌಲ್ವಿ ಅವರೂ ಕೊರೊನಾ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿ, ‘ದೇವರ ಅನುಗ್ರಹದಿಂದ ಯಾರಿಗೂ ಏನೂ ಆಗುವುದಿಲ್ಲ. ಎಲ್ಲರೂ ಧೈರ್ಯದಿಂದ ಇರಬೇಕು’ ಎಂದು ಧೈರ್ಯತುಂಬಿದರು.

ಎಲ್ಲೆಲ್ಲೂ ಮಾಸ್ಕ್‌ಧಾರಿಗಳು: ಕೋವಿಡ್‌–19 ಸೋಂಕಿನಿಂದಲೇ ನಗರದ ವೃದ್ಧ ಮೊಹ್ಮದ್‌ ಸಿದ್ಧಿಕಿ ಅವರು ಮೃತಪಟ್ಟಿರುವ ಸುದ್ದಿಯು ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸಿಕೊಂಡೇ ಹೊರಗೆ ಬಂದಿದ್ದರು. ವಾಹನಗಳಲ್ಲಿ ಓಡಾಡುವಾಲೂ ಮಾಕ್ಸ್‌ ಹಾಗೂ ಕರವಸ್ತ್ರಗಳನ್ನು ಧರಿಸಿಕೊಂಡಿದ್ದರು.

ಉಮ್ರಾ, ಹಜ್‌ ಬುಕಿಂಗ್‌ ರದ್ದು

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಾದ ಸೌದಿ ಅರೇಬಿಯಾದ ಉಮ್ರಾ ಹಾಗೂ ಹಜ್‌ಗಳು ಪ್ರತಿ ತಿಂಗಳೂ ನಗರದಿಂದ ನೂರಾರು ಜನರು ಭೇಟಿ ನೀಡುತ್ತಾರೆ. ಅವರಿಗೆ ವಿಮಾನಯಾನದ ಬುಕಿಂಗ್‌ ಮಾಡಿಕೊಡುವ ಸಂಸ್ಥೆಗಳಿಗೂ ಇದೀಗ ಕೆಲಸವಿಲ್ಲದಂತಾಗಿದೆ. ಸೌದಿಗೆ ತೆರಳುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ್ದರಿಂದ ಹೆಚ್ಚು ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಿಸುತ್ತಿಲ್ಲ. ಆದರೆ, ಮುಂಚೆ ಮಾಡಿಸಿದವರೂ ಟಿಕೆಟ್‌ ಬುಕಿಂಗ್‌ ರದ್ದುಪಡಿಸಿದ್ದಾರೆ. ಹೀಗಾಗಿ, ಸಾಕಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದು ಕೆಬಿಎನ್‌ ದರ್ಗಾ ರಸ್ತೆಯಲ್ಲಿರುವ ಟ್ರಾವೆಲ್ ಸಂಸ್ಥೆಯೊಂದರ ಮುಖ್ಯಸ್ಥ ಸಯ್ಯದ್‌ ಸಂಧಾನಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT