ಯಡ್ರಾಮಿ: ಆರಂಭದಲ್ಲಿ ಉತ್ತಮವಾಗಿದ್ದ ಹತ್ತಿ ಬೆಲೆ ಕೆಲ ದಿನಗಳಿಂದ ಕುಸಿತ ಕಂಡಿದ್ದು, ರೈತರಿಗೆ ನಿರಾಸೆ ಮೂಡಿಸಿದೆ. ಇಳುವರಿ ನಷ್ಟದ ಜತೆಗೆ ಬೆಲೆ ಇಳಿಕೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಎರಡೇ ವಾರದಲ್ಲಿ ₹3 ಸಾವಿರ ಕುಸಿತ ಕಂಡಿದೆ.
ತಿಂಗಳ ಹಿಂದೆ ಹತ್ತಿ ಬೆಳೆಗೆ ಪ್ರತಿ ಕ್ವಿಂಟಾಲ್ ₹12 ರಿಂದ 14 ಸಾವಿರ ಬೆಲೆ ಇತ್ತು. ಹತ್ತಿ ಬಿಡಿಸಿ ಮನೆಗೆ ತರುವ ಹೊತ್ತಿಗೆ ಧಾರಣೆ ₹10 ಸಾವಿರಕ್ಕೆ ತಲುಪಿತು. ಇದೀಗ ₹8 ಸಾವಿರದ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದು, ಬೆಲೆ ಇಳಿಕೆ ಆತಂಕದಲ್ಲಿ ಕೂಲಿಕಾರರಿಗೆ ಹೆಚ್ಚು ಹಣ ನೀಡಿ ಹತ್ತಿ ಬಿಡಿಸಿ ಮನೆಗೆ ತಂದಿದ್ದ ರೈತರಿಗೆ ಇದು ನುಂಗಲಾರದ ತುತ್ತಾಗಿದೆ.
ದುಬಾರಿ ಬೀಜ, ಗೊಬ್ಬರ, ಬಿತ್ತನೆ ವೆಚ್ಚ ಹಾಗೂ ಹತ್ತಿ ಬಿಡಿಸುವ ಕೂಲಿ ಸೇರಿ ಪ್ರತಿ ಎಕರೆಗೆ 25ಸಾವಿರಕ್ಕೂ ಅಧಿಕ ಖರ್ಚಾಗಿದೆ. 40 ಕ್ವಿಂಟಾಲ್ ಬೆಳೆದಿದ್ದೇವೆ, ಆದರೆ ಬೆಲೆ ಇಳಿಕೆಯಾಗಿ ನಷ್ಟ ಹೆಗಲೇರಿದೆ ಎನ್ನುತ್ತಾರೆ ಶರಣಪ್ಪ ದೊಡಮನಿ.
ಈ ಭಾಗದಲ್ಲಿ ಅತಿವೃಷ್ಟಿಯಿಂದ ಮತ್ತು ನೆಟೆರೋಗದಿಂದ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಪರಿಹಾರಕ್ಕಾಗಿ ಪ್ರತಿಭಟನೆ ನಡೆಯುತ್ತಿವೆ. ಹತ್ತಿಯಾದರೂ ಸ್ವಲ್ಪ ಮಟ್ಟಿಗೆ ಕೈ ಹಿಡಿಯುತ್ತದೆ ಎಂಬ ಭರವಸೆ ಮೂಡಿಸಿತ್ತು. ಆದರೆ ಹತ್ತಿ ಬೆಲೆ ತೀವ್ರ ಇಳಿಕೆಯಿಂದ ನೆಮ್ಮದಿ ಹಾಳು ಮಾಡಿದೆ ಎನ್ನುತ್ತಾರೆ ರೈತರು. ಇನ್ನು ದರ ಏರಬಹುದು ಎಂದು ಮನೆಯಲ್ಲಿಟ್ಟುಕೊಂಡರೆ ಹಳದಿ ಬಣ್ಣಕ್ಕೆ ತಿರುಗಿ ಹತ್ತಿಯ ಗುಣಮಟ್ಟ ಕೆಡುತ್ತದೆ. ಹೀಗಾಗಿ ಹತ್ತಿ ಬೆಳೆಗಾರರು ಆತಂಕದಲ್ಲೇ ದಿನ ದೂಡುವಂತಾಗಿದೆ.