ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿರುವ ಕಾರ್ಮಿಕರನ್ನು ಕರೆತರಲು ಮಾನ್ಪಡೆ ಒತ್ತಾಯ

ನರೇಗಾ ಕೆಲಸ ಶುರು ಮಾಡಲು ಕೆಪಿಆರ್‌ಎಸ್‌ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹ
Last Updated 5 ಮೇ 2020, 12:25 IST
ಅಕ್ಷರ ಗಾತ್ರ

ಕಲಬುರ್ಗಿ:ಜಿಲ್ಲೆಯ ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರು ಮಹಾರಾಷ್ಟ್ರದಲ್ಲಿದ್ದು, ಅವರನ್ನು ಕರೆತರಲು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ಡಾ.ಉಮೇಶ ಜಾಧವ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ 600 ಬಸ್‌ಗಳಲ್ಲಿ ಅಭ್ಯರ್ಥಿಗಳು ಕಾರ್ಮಿಕರನ್ನು ವೋಟು ಹಾಕಿಸಲು ಕರೆತಂದಿದ್ದರು. ಈಗ ಬರುತ್ತೇನೆ ಎಂದು ಬೇಡಿಕೊಳ್ಳುತ್ತಿದ್ದರೂ ಜಾಧವ್‌ ಅವರಿಗೆ ಏನೂ ಅನಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಗ್ರಾಮೀಣ ಭಾಗದಲ್ಲಿ ಜನರ ಕೈಯಲ್ಲಿ ಹಣ ಇಲ್ಲ. ಕೂಡಲೇ ಜಿಲ್ಲಾ ಪಂಚಾಯಿತಿಯಿಂದ ನರೇಗಾ ಕೆಲಸಗಳನ್ನು ಶುರು ಮಾಡಬೇಕು. ಚಿಂಚನಸೂರ ಹಾಗೂ ಸಿರಿಚಂದ ಗ್ರಾಮಗಳಲ್ಲಿ ಕೂಲಿಯನ್ನು ಇನ್ನೂ ನೀಡುತ್ತಿಲ್ಲ. ಇದು ತಡವಾದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟೇ ಸಮಸ್ಯೆಗಳು ತಲೆದೋರಲಿವೆ’ ಎಂದು ಎಚ್ಚರಿಸಿದರು.

‘ಕೆಂಪು ವಲಯದಲ್ಲಿದ್ದ ಕಲಬುರ್ಗಿಯನ್ನು ಕಿತ್ತಳೆ ವಲಯಕ್ಕೆ ಬದಲಾಯಿಸಿದ್ದರಲ್ಲಿ ಮದ್ಯದ ಲಾಬಿ ಕೆಲಸ ಮಾಡಿದೆ. ಜಿಲ್ಲೆಯಲ್ಲಿರುವ 367 ಮದ್ಯದ ಅಂಗಡಿಗಳ ಪೈಕಿ 100 ಅಂಗಡಿಗಳು ಒಂದೇ ಕುಟುಂಬಕ್ಕೆ ಸೇರಿವೆ. ಸರ್ಕಾರ ಇಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದಿತ್ತು’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡಿ, ‘ಆಳಂದ ಮತ್ತು ಚಿಂಚೋಳಿ ತಾಲ್ಲೂಕುಗಳನ್ನು ಪ್ರತಿನಿಧಿಸುವ ಬೀದರ್‌ ಸಂಸದ ಭಗವಂತ ಖೂಬಾ ಅವರು ಒಮ್ಮೆಯೂ ಈ ತಾಲ್ಲೂಕುಗಳಿಗೆ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೂ ಬಂದಿಲ್ಲ’ ಎಂದು ಟೀಕಿಸಿದರು.

ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮಹೇಶ ರಾಠೋಡ, ಪಾಂಡುರಂಗ ಮಾವಿನಕರ, ಸುಧಾಮ ಧನ್ನಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT