ಚಿತ್ತಾಪುರ: ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾವ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯಕಂಡಿದೆ.
ಅಲ್ಲೂರ್ (ಬಿ) ಗ್ರಾಮದ ಭೀಮರಾಯ ಮಲ್ಲೇಶಿ ನೀಲಕಂಠರ್ (22) ಕೊಲೆಯಾದವರು. ಸಿದ್ದಪ್ಪ ಮಲ್ಲಪ್ಪ ಆರೋಪಿ. ಭೀಮರಾಯ ಮತ್ತು ಸಿದ್ದಪ್ಪ ನಡುವೆ ಗುರುವಾರ ಸಂಜೆ ಕಟ್ಟೆಮ್ಮದೇವಿ ಕಟ್ಟೆಯ ಹತ್ತಿರ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಮಾತಿಗೆ ಮಾತು ಬೆಳೆದಿತ್ತು. ಇದೇ ದ್ವೇಷದಿಂದ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಭೀಮರಾಯನ ಮನೆಯ ಕಟ್ಟೆ ಮೇಲೆ ಮಲಗಿದ್ದ. ಆಗ ಸ್ಥಳಕ್ಕೆ ಬಂದ ಸಿದ್ದಪ್ಪ ಮಲಗಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿದ್ದಾನೆ ಎಂದು ಎಫ್ಐಆರ್ ದಾಖಲಿಸಲಾಗಿದೆ.
ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರ, ವಾಡಿ ಕ್ರೈಂ ಪಿಎಸ್ಐ ಶ್ರೀಶೈಲ ಅಂಬಾಟಿ, ಎಎಸ್ಐ ಸಿದ್ರಾಮಪ್ಪ ಬಳಿಚಕ್ರ ಅವರು ಸಿಬ್ಬಂದಿಯೊಂದಿಗೆ ಶುಕ್ರವಾರ ಬೆಳಿಗ್ಗೆ ಅಲ್ಲೂರ್(ಬಿ) ಗ್ರಾಮದ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮಲ್ಲೇಶಿ ಹಣಮಂತ ಎಂಬುವವರು ನೀಡಿರುವ ದೂರಿನಡಿ ಆರೋಪಿ ಸಿದ್ದಪ್ಪ ಮಲ್ಲಪ್ಪ, ಸಾಬಣ್ಣ ಮಲ್ಲಪ್ಪ, ಶ್ರೀದೇವಿ ಮಲ್ಲಪ್ಪ, ಯೆಂಕಮ್ಮ ಸಾಬಣ್ಣ, ಶರಣಮ್ಮ ದುರ್ಗಣ್ಣ ಅವರ ವಿರುದ್ಧ ಕೇಸ್ ದಾಖಲಾಗಿದೆ. ಕೊಲೆ ಆರೋಪಿ ಹಾಗೂ ಆತನ ಸಂಪರ್ಕದಲ್ಲಿದ್ದ ಎಲ್ಲರೂ ಊರು ಬಿಟ್ಟು ಪರಾರಿಯಾಗಿದ್ದು, ಶೋಧ ಕಾರ್ಯ ನಡೆದಿದೆ