ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಹ ಪೀಡಿತ ತಾಲ್ಲೂಕು ಪಟ್ಟಿಗೆ ಗುರುಮಠಕಲ್ ಸೇರಿಸಿ’

ಶಾಸಕ ನಾಗನಗೌಡ ಕಂದಕೂರ ಆಗ್ರಹ
Last Updated 30 ಅಕ್ಟೋಬರ್ 2020, 10:54 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಸಕ್ತ ಸಾಲಿನಲ್ಲಿ ಗುರುಮಠಕಲ್ ಕ್ಷೇತ್ರ ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದೆ. ಆದರೆ, ಸರ್ಕಾರ ಗುರುಮಠಕಲ್‍ನ್ನು ಪ್ರವಾಹ ಪೀಡಿತ ತಾಲ್ಲೂಕಿನ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವುದು ಬೇಸರ ತರಿಸಿದೆ’ ಎಂದು ಶಾಸಕ ನಾಗನಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ಬಾರಿ ಉತ್ತರ ಕರ್ನಾಟದ ಅನೇಕ ಜಿಲ್ಲೆಗಳು ವರುಣನ ಅವಕೃಪೆಗೆ ಒಳಗಾಗಿ ನಲುಗಿವೆ. ವಿಶೇಷವಾಗಿ ಜಿಲ್ಲೆ ಅದರಲ್ಲೂ ಗುರುಮಠಕಲ್ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ರೈತಾಪಿ ವರ್ಗ ಬೆಳೆದ ಬೆಳೆಗಳು ಹಾಳಾಗಿವೆ. ಜಿಲ್ಲೆಯ 5 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದ ಸರ್ಕಾರ ಗುರುಮಠಕಲ್ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗುರುಮಠಕಲ್ ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರಿನ 45,108 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದ್ದು, ಇದರಲ್ಲಿ 20,344 ಹತ್ತಿ, 12,265 ತೊಗರಿ, 6,924 ಹೆಸರು ಮತ್ತು 4,626 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಅಲ್ಲದೆ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ 157 ಮಿ.ಮೀಗಿಂತ ಶೇ 88ರಷ್ಟು 295 ಮಿ.ಮೀ ಮಳೆಯಾಗಿದೆ. ಜುಲೈನಿಂದ ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ 21,456 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಸಂಪೂರ್ಣ ನಾಶವಾಗಿವೆ’ ಎಂದು ವಿವರಿಸಿದ್ದಾರೆ.

‘ರಾಜ್ಯ ಸರ್ಕಾರ ಮುಂಗಾರು ಹಂಗಾಮಿನ ಆಗಸ್ಟ್‌ ತಿಂಗಳಲ್ಲಿ ರಾಜ್ಯದ 130 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿ ನಮ್ಮ ತಾಲ್ಲೂಕನ್ನು ಕೈಬಿಟ್ಟಿದೆ. ಅಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ 16 ಜಿಲ್ಲೆಗಳ 43 ತಾಲ್ಲೂಕುಗಳನ್ನು ಮತ್ತೆ ಅತಿವೃಷ್ಟಿ ಪೀಡಿತ ಎಂದು ಘೋಷಿಸಿದಾಗಲೂ ಗುರುಮಠಕಲ್‍ನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ಆಪಾದಿಸಿದ್ದಾರೆ.

‘ತಾಲ್ಲೂಕಿನ ಸುಮಾರು 18,071 ಜನ ರೈತರು ಬೆಳೆ ಬೆಳೆಗಳು ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಗುರುಮಠಕಲ್ ತಾಲ್ಲೂಕನ್ನು ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದ್ದಾರೆ.

‘ಗುರುಮಠಕಲ್ ತಾಲ್ಲೂಕು ತೆಲಂಗಾಣದ ಗಡಿಗೆ ಅಂಟಿಕೊಂಡಿದೆ. ಕ್ಷೇತ್ರದ ಜನ ಮೊದಲೇ ಕೋವಿಡ್-19 ನಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಇದೆಲ್ಲೆವನ್ನು ಮನಗೊಂಡು ನಾನು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿದ್ದು, ಅವರು ಕೂಡಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಗುರುಮಠಕಲ್ ತಾಲ್ಲೂಕನ್ನು ಪ್ರವಾಹ ಪೀಡಿತ ತಾಲೂಕಿಗಳ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಕೂಡಲೇ ಸರ್ಕಾರ ತಾಲ್ಲೂಕಿನ ಬಗ್ಗೆ ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕು’ ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT