ಯಡ್ರಾಮಿ: ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೆಳೆ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ವರದಿ ತಿಳಿಸುವಂತೆ ತಹಶೀಲ್ದಾರ್ ಅವರಿಗೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ರೈತರು ಬಿಸಿಲಿನಲ್ಲೇ ಕುಳಿತು ಪ್ರತಿಭಟನೆ ನೆಡೆಸುತ್ತಿದ್ದರೂ ತಹಶೀಲ್ದಾರ್ ಶಾಂತಗೌಡ ಬಿರಾದಾರ ಹೊರಗೆ ಬಾರದೆ ಇದಿದ್ದಕ್ಕೆ ಸಂಘಟನೆಗಳ ಪದಾಧಿಕಾರಿಗಳು ಒಳಗೆ ನುಗ್ಗಿದಾಗ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಪರಿಹಾರಕ್ಕೆ ಕಾಲಾವಕಾಶ ಕೊಡಿ ಎಂದು ಕೇಳಿದರು. ಇದಕ್ಕೆ ಒಪ್ಪದ ಸಂಘಟನೆ ಮುಖಂಡರು ಮತ್ತು ರೈತರು ಕಚೇರಿ ಮುಂದೆ ಧರಣಿ ಸತ್ಯಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಮಾತನಾಡಿ ಈರಣ್ಣ ಭಜಂತ್ರಿ ಮಾತನಾಡಿದರು.
ಅಮರನಾಥ ಸಾಹು, ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳಿಗೆ ಲಾಗಿನ್ ಕೊಟ್ಟು ಕಾರ್ಯನಿರ್ವಹಿಸಲು ಸೂಚಿಸಬೇಕು ಹಾಗೂ ಒಂದು ವಾರದೊಳಗೆ ಪರಿಹಾರವನ್ನು ಒದಗಿಸಿ, ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಬೇಡಿಕೆ ಈಡೇರದೆ ಇದ್ದರೆ ಕ್ರಿಮಿನಾಶಕ ಬಾಟಲಿ ತೆಗೆದುಕೊಂಡು ಬಂದು ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಶೇಫಿಉಲ್ಲಾ ದಖನಿ, ಲಾಳೆಸಾಬ ಮನಿಯಾರ, ಅಫ್ರೋಜ್ ಅತ್ನೂರ, ಅಮರನಾಥ ಸಾಹು ಕುರಳಗೇರಾ, ಚಂದ್ರು ಮಲ್ಲಾಬಾದ್ ಸೇರಿದಂತೆ ವಿವಿಧ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳು, ರೈತರು ಇದ್ದರು.