ಕಮಲಾಪುರ (ಕಲಬುರ್ಗಿ ಜಿಲ್ಲೆ): ತಡೆರಹಿ ಬಸ್ ನಿಲುಗಡೆ ಮಾಡಬೇಕು ಎಂಬ ಆದೇಶ ಇದ್ದರೂ ಬಸ್ ನಿಲ್ಲಿಸದ ಧೋರಣೆ ಖಂಡಿಸಿ ಮತ್ತು ಎಲ್ಲ ಅಂತರರಾಜ್ಯ ಬಸ್ ಗಳಲ್ಲಿ ವಿದ್ಯಾರ್ಥಿ ಪಾಸ್ ಹೊಂದಿದವರನ್ನು ಹತ್ತಿಸಿಕೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ತಾಲ್ಲೂಕು ಕೇಂದ್ರ ಕಮಲಾಪುರದಲ್ಲಿ ಪ್ರತಿಭಟನೆ ನಡೆಸಿದರು.
ಆ ಮಾರ್ಗದಲ್ಲಿ ಹೊರಟಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಅವರಿಗೂ ಘೇರಾವ್ ಹಾಕಿದರು.
ಈಚೆಗೆ ತಡೆರಹಿತ ಬಸ್ ಗಳ ನಿಲುಗಡೆಗೆ ಆದೇಶ ಹೊರಡಿಸಲಾಗಿದರ. ಆದರೆ, ಬಸ್ ಚಾಲಕ ನಿರ್ವಾಹಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿಲ್ಲ. ಇದರಿಂದ ಕೆರಳಿದ ಪ್ರಯಾಣಿಕರು ಬೆಳಿಗ್ಗೆಯಿಂದ ತಡೆ ರಹಿತ ಬಸ್ ಗಳನ್ನು ಕಮಲಾಪುರದಲ್ಲಿ ತಡೆದರು.
‘ಎಲ್ಲ ಬಸ್ ಗಳಿಗೆ ಅಂತರರಾಜ್ಯದ ನಾಮಫಲಕ ಹಾಕಿಕೊಂಡು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಯಾಮಾರಿಸುತ್ತಿದ್ದಾರೆ. ವಿನಾಕಾರಣ ಚಾಲಕ, ನಿರ್ವಾಹಕರು ತೊಂದರೆ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಗುರು ಮಾಟೂರ, ಅಮರ ಚಿಕ್ಕೇಗೌಡ, ಅರುಣ ದೋಶೆಟ್ಟಿ, ರಾಮಲಿಂಗ ಗುತ್ತೇದಾರ ಆರೋಪಿಸಿದರು.