ಪಟ್ಟಣದ ವೆಂಕಟೇಶನಗರ, ಕೆಇಬಿ ಕಾಲೊನಿ, ವಿದ್ಯಾನಗರ, ದೊಡ್ಡಅಗಸಿ, ಊಡಗಿ ರಸ್ತೆ, ಬಸವ ನಗರ ನೂಲಾಗಲ್ಲಿ, ಇಂದಿರಾನಗರ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತಿರುವುದು, ನೀರಿನ ಜೊತೆ ಮಣ್ಣು ಕೂಡಿಕೊಂಡು ಬರುವುದು ಹಾಗೂ ನೀರಲ್ಲಿ ಸಣ್ಣ ಸಣ್ಣ ಹುಳುಗಳು ಹರಿದು ಬರುತ್ತಿವೆ. ಇದರಿಂದಾಗಿ ಪುರಸಭೆಯಿಂದ ಪೂರೈಸಲಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲದಂತಾಗಿದ್ದು, ಜನ ಫಿಲ್ಟರ್ ನೀರನ್ನು ಖರೀದಿಸಿ ಕುಡಿವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಅನೇಕ ದಿನಗಳಿಂದ ಪರಿಸ್ಥಿತಿ ಹೀಗೆಯೇ ನಡೆಯುತ್ತಿದ್ದು, ಅಧಿಕಾರಿಗಳು ಇಲ್ಲಿಯವರೆಗೂ ಸಮಸ್ಯೆ ಇತ್ಯರ್ಥಪಡಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.