ಕಲಬುರಗಿ: ‘ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಅನಗತ್ಯವಾಗಿ ಒಬ್ಬ ದಲಿತ ಪೊಲೀಸ್ ಅಧಿಕಾರಿಯನ್ನು ಬಲಿಪಶು ಮಾಡಿದ್ದಾರೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ್ ಭದ್ರೆ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ. ಶರಣಪ್ರಕಾಶ ಪಾಟೀಲ ಅವರ ಒತ್ತಡದಿಂದಲೇ ಪೊಲೀಸ್ ಇಲಾಖೆ ಮುಧೋಳ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆನಂದರಾವ್ ಅವರನ್ನು ಅಮಾನತು ಮಾಡಿದೆ. ದಲಿತ ವ್ಯಕ್ತಿಯನ್ನು ಕೆಲವರು ಥಳಿಸಿದ್ದನ್ನು ಸಮಿತಿ ಖಂಡಿಸುತ್ತದೆ. ಆದರೆ, ಅದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದ್ದಾರೆ. ಆದರೂ, ಸದಾ ದಲಿತ ವಿರೋಧಿಯಾಗಿರುವ ಶರಣಪ್ರಕಾಶ ಅವರು ಅನಗತ್ಯವಾಗಿ ಒತ್ತಡ ಹೇರಿದ್ದಾರೆ’ ಎಂದರು.
‘ತಾವು ಸಚಿವರಾಗಿದ್ದಾಲೂ ಹಲವು ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆ. ಈಗಲೂ ಆ ಧೋರಣೆಯನ್ನು ಮುಂದುವರಿಸಿದ್ದಾರೆ’ ಎಂದು ಆರೋಪಿಸಿದರು.
‘ಯಾವುದೇ ಕರ್ತವ್ಯಲೋಪ ಎಸಗದ ಆನಂದರಾವ್ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಿದರು.
ರಾಜ್ಯ ಸಂಘಟನಾ ಸಂಚಾಲಕ ಡಾ. ಮಲ್ಲೇಶಿ ಸಜ್ಜನ, ಜಿಲ್ಲ ಸಂಚಾಲಕ ಮಹಾಂತೇಶ ಬಡದಾಳ, ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಜಿಲ್ಲಾ ಖಜಾಂಚಿ ಸೂರ್ಯಕಾಂತ ಆಜಾದಪೂರ, ನಗರ ಸಂಚಾಲಕ ಶಿವಕುಮಾರ ಕೋರಳ್ಳಿ, ನಗರ ಘಟಕ ಸಂಚಾಲಕ ಕಪಿಲ ಸಿಂಗೆ ಇದ್ದರು.