ಕಲಬುರ್ಗಿ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಮಂಗಳವಾರ ನೆರವೇರಿತು. ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದೆ.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶಾಕಾಪುರ ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಆಗಿ ಪಾಳಾ ಹಿರೇಮಠದ ಡಾ.ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗೌರವ ಅಧ್ಯಕ್ಷರಾಗಿ ಕಡಗಂಚಿ ಶಾಂತಲಿಂಗೇಶ್ವರ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಮಠದ ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಆಯ್ಕೆಗೊಂಡಿದ್ದಾರೆ.
ಪಡಸಾವಳಿ, ಗುಂಡಗುರ್ತಿ, ದೇವಾಪುರ, ಅಷ್ಟಗಿ, ಮಂಗಲಗಿ, ಮಹಾಗಾಂವ, ಮಾದನಹಿಪ್ಪರಗಿ, ತೊಟ್ನಳ್ಳಿ, ಹರಸೂರು ಕಲ್ಮಠ, ಹಲಕರಟಿ, ಚಿತ್ತಾಪುರ, ದಂಡಗುಂಡ, ವಿ.ಕೆ.ಸಲಗರ, ಚಿಣಮಗೇರಿ ನೂತನ ಶ್ರೀಗಳು, ಶ್ರೀನಿವಾಸ ಸರಡಗಿ, ಅಫಜಲಪುರ ಶ್ರೀಗಳನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ನಂತರ ಆಶೀರ್ವಚನ ನೀಡಿದ ರಂಭಾಪುರಿ ಶ್ರೀಗಳು, ‘ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುತ್ತ ಬಂದಿರುವ ವೀರಶೈವ ಧರ್ಮದ ಸಂಸ್ಕೃತಿ, ಮಾನವೀಯ ಮೌಲ್ಯಗಳ ಸಂರಕ್ಷಣೆ, ಗುರುಪೀಠ ಪರಂಪರೆಯ ಇತಿಹಾಸ, ಧಾರ್ಮಿಕ ಸಂಸ್ಕಾರ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಯ್ಕೆಗೊಂಡ ನೂತನ ಪದಾಧಿಕಾರಿಗಳು ಕಾರ್ಯ ಕೈಗೊಳ್ಳಲಿ’ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷರಾದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಡಾ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ‘ಸಂಸ್ಥೆಯ ಧ್ಯೇಯೋದ್ದೇಶಗಳಂತೆ ವೀರಶೈವ ಧರ್ಮ, ಗುರು ಪರಂಪರೆಯ ಮೌಲ್ಯಗಳನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕಾರ್ಯ ಮಾಡುತ್ತೇವೆ. ಜಿಲ್ಲೆಯ ಎಲ್ಲ ಶಿವಾಚಾರ್ಯ ಶ್ರೀಗಳ ಸಹಕಾರ ಅವಶ್ಯವಾಗಿ ಬೇಕು. ಭವಿಷ್ಯತ್ತಿನ ದಿನಗಳಲ್ಲಿ ತಾಲ್ಲೂಕು ಘಟಕಗಳನ್ನು ಹುಟ್ಟು ಹಾಕಿ ಅಲ್ಲಿಯೂ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತೇವೆ: ಎಂದರು.