ಚಿಂಚೋಳಿ (ಕಲಬುರಗಿ ಜಿಲ್ಲೆ): ಪಟ್ಟಣದ ಧನಗರ ಗಲ್ಲಿಯಲ್ಲಿ ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಝರಣಮ್ಮ ಅಂಬಣ್ಣ ಬಸಗೊಂಡ (45), ಮಹೇಶ ಅಂಬಣ್ಣ ಬಸಗೊಂಡ (20), ಸುರೇಶ ಅಂಬಣ್ಣ ಬಸಗೊಂಡ (18) ಮೃತರು.
ಭಾನುವಾರ ಬೆಳಗಿನ ಜಾವ 1ರ ಸುಮಾರಿಗೆ ಗುಡುಗು ಮಿಂಚು ಸಹಿತ ಜೋರು ಮಳೆ ಸುರಿಯುತ್ತಿದ್ದಾಗ ವಿದ್ಯುತ್ ತಂತಿ ಕಡಿದು ನೆಲಕ್ಕೆ ಬಿದ್ದಿದೆ. ಮನೆಯ ಹೊರಗಡೆ ಸಂಗ್ರಹಿಸಿದ್ದ ಹೊಟ್ಟು (ಜಾನುವಾರುಗಳ ಮೇವು) ಮಳೆಯಲ್ಲಿ ನೆನೆಯುತ್ತದೆ ಎಂದು ತಾಡಪತ್ರಿಯಿಂದ ಮುಚ್ಚಲು ಹೋದಾಗ ವಿದ್ಯುತ್ ತಂತಿ ತಗುಲಿದೆ. ಘಟನೆಯಲ್ಲಿ ಅಂಬಣ್ಣನಿಗೆ ಗಾಯಗಳಾಗಿವೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.