ಚಿತ್ತಾಪುರ: ‘ದೌರ್ಜನ್ಯಕ್ಕೆ ಒಳಗಾದವರು, ದೇವದಾಸಿ ಪದ್ದತಿಯಿಂದ ಬಳಲುತ್ತಿರುವ ಮಹಿಳೆಯರು, ಭಿಕ್ಷೆ ಬೇಡಿ ಬದುಕುವ ಮಂಗಳಮುಖಿಯರ ಪರ ನಮ್ಮ ನಿಗಮ ಕೆಲಸ ಮಾಡುತ್ತಿದೆ’ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ತೆಂಗಳಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸಿದ್ರಾಮೇಶ್ವರ ಮಕ್ಕಳ ಮತ್ತು ಮಹಿಳಾ ವಲ್ಫೇರ್ ಸಂಸ್ಥೆಯಿಂದ ಆಯೋಜಿಸಿದ್ದ ಸ್ವಯಂ ಉದ್ಯೋಗ ಹೊಲಿಗೆ ತರಬೇತಿ ಕಾರ್ಯಕ್ರಮ ಮತ್ತು ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಿಂದ ಶೋಷಣೆಗೆ ಮತ್ತು ತುಳಿತಕ್ಕೊಳಗಾದ ಮಹಿಳೆಯರ ಜೀವನ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಅನೇಕ ಯೋಜನೆ, ಸೌಲಭ್ಯಗಳಿವೆ. ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳು ಸ್ವಾಭಿಮಾನ ಮತ್ತು ಗೌರವದಿಂದ ಬದುಕುವಂತೆ ವ್ಯವಸ್ಥೆ ಮಾಡಲು ನಿಗಮವು ಅನೇಕ ಯೋಜನೆ ರೂಪಿಸಿ ಆರ್ಥಿಕ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಹೇಳಿದರು.
ಮಹಿಳಾ ಸ್ತ್ರೀಶಕ್ತಿ ಸಂಘ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರಿಗಾಗಿ ಬಡ್ಡಿ ರಹಿತವಾಗಿ ₹ 5 ಲಕ್ಷ ಹಾಗೂ ಸಾಮಾನ್ಯ ವರ್ಗದ ಮಹಳೆಯರಿಗೆ ₹ 2 ಲಕ್ಷದವರೆಗೆ ಸಾಲ ನೀಡುವ ಸೌಲಭ್ಯವಿದೆ. ನಿಗಮದ ಈ ಸೌಲಭ್ಯ ಪಡೆದುಕೊಂಡು ಮಹಿಳೆಯರು ಸ್ವಯಂ ಉದ್ಯೋಗ ಚಟುವಟಿಕೆ ಕೈಗೊಂಡು ಆರ್ಥಿಕ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ನಿಗಮದಿಂದ 14 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಹೊಲಿಗೆ ತರಬೇತಿ ಕೇಂದ್ರ ಆರಂಭಿಸುತ್ತಿದೆ. ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಬೇಕು ಎನ್ನುವ ಆಲೋಚನೆಯಿದೆ ಎಂದು ಹೇಳಿದರು.
ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಯೋಜನಾ ಅಧಿಕಾರಿ ಟಿ.ಎನ್ ಶಾಂತಲಾ, ಮಾಜಿ ದೇವದಾಸಿ ಪುನರ್ವಸತಿ ಜಿಲ್ಲಾ ಯೋಜನೆ ಅಧಿಕಾರಿ ಎಸ್.ಎನ್ ಹಿರೇಮಠ ಅವರು ಮಾತನಾಡಿದರು.
ಸಿದ್ರಾಮೇಶ್ವರ ಮಕ್ಕಳ ಮತ್ತು ಮಹಿಳಾ ವೆಲ್ಫೇರ್ ಸಂಸ್ಥೆಯ ಕಾರ್ಯದರ್ಶಿ ಸಂದೇಶ ಎಸ್. ಕಲಬುರ್ಗಿ , ನಾಗುಬಾಯಿ ಜಿತುರೆ, ಕವಿತಾ ಚವಾಣ್ ಇದ್ದರು.