ಅಫಜಲಪುರ: ತಾಲ್ಲೂಕಿನ ಚೌಡಾಪುರದಲ್ಲಿ ವ್ಯಕ್ತಿಯೊಬ್ಬನಿಗೆ ಅಪಹರಿಸಿ ತಾವು ಸಿಬಿಐ ಅಧಿಕಾರಿಗಳೆಂದು ಹೆದರಿಸಿ ₹ 11.20 ಲಕ್ಷ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಲ ಗಾಣಗಾಪೂರ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಜುಲೈ 21 ರಂದು ರಾತ್ರಿ 10.30ಕ್ಕೆ ಚೌಡಾಪುರ ಗ್ರಾಮದಲ್ಲಿ ನಾಲ್ವರು ಅಪರಿಚಿತರು, ನಾವು ಸಿಬಿಐ ಅಧಿಕಾರಿಗಳಿದ್ದೇವೆ. ನೀವು ಮಟ್ಕಾ ಬರೆದುಕೊಳ್ಳುವ ದಂಧೆ ಮಾಡುತ್ತಿದೆ ಎಂದು ತಿಳಿದುಬಂದಿದೆ ಎಂದು ಧಮಕಿ ಹಾಕಿ ಯಂಕಪ್ಪ ಹಣಮಂತ್ ದೇವಕರ್ ಎಂಬುವವರಿಗೆ ಜೀಪಿನಲ್ಲಿ ಹಾಕಿಕೊಂಡು ಮದರಾ (ಬಿ) ಕ್ರಾಸ್ಗೆ ಕರೆದುಕೊಂಡು ₹ 11.20 ಲಕ್ಷ ಕೊಟ್ಟರೆ ನಿನಗೆ ಬಿಡುತ್ತೇವೆ. ಇಲ್ಲದಿದ್ದರೆ ಜೈಲಿಗೆ ಹಾಕುತ್ತೇವೆ ಎಂದು ಹೆದರಿಸಿದರು. ನಂತರ ಸಾರ್ವಜನಿಕರು ಕೂಡಿದ್ದರಿಂದ ಯಂಕಪ್ಪ ದೇವಕರ್ ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ದೇವ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿತ್ತು.
ಗುಡೂರ್ ತಾಂಡಾ ನಿವಾಸಿ ರಾಮು ಪವಾರ್, ಜಾನೇಶ್ ದೇಸು ಚವ್ಹಾಣ್ ಹಾಗೂ ಸ್ಟೇಷನ್ ಗಾಣಗಾಪುರದ ಬಸವರಾಜ ಗುರುಶಾಂತ ದಿಂಗೆ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊ೦ಡು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಕಳಿಸಿದ್ದಾರೆ.