ಯಡ್ರಾಮಿ: ತಾಲ್ಲೂಕಿನ ಪ್ರಥಮ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನವು ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿ ಫೆ.29ರಂದು ನಡೆಯಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ, ಜೇವರ್ಗಿ ಶಾಸಕ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅಜಯ ಸಿಂಗ್ ರಾಷ್ಟ ಧ್ವಜಾರೋಹಣ ನೆರವೇರಿಸುವುದರ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡುವರು. ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ನಾಗಪ್ಪ ಎಂ.ಸಜ್ಜನ ನಾಡಧ್ವಜಾರೋಹಣ ಮಾಡುವರು. ಯಡ್ರಾಮಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಸುರೇಶ ಡಂಬಳ, ಉಪಾಧ್ಯಕ್ಷ ಈರಣ್ಣ ಸುಂಕದ ಉಪಸ್ಥಿತರಿರುವರು.
ಮೆರವಣಿಗೆ: ಬೆಳಿಗ್ಗೆ 8.30ಕ್ಕೆ ಅಲಂಕರಿಸಿದ ಎತ್ತಿನಬಂಡಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ರಂಗಕರ್ಮಿ, ಸಾಹಿತಿ ಎಲ್.ಬಿ.ಕೆ. ಆಲ್ದಾಳರ ಭವ್ಯ ಮೆರವಣಿಗೆಯನ್ನು ತಹಶೀಲ್ದಾರ್ ಬಸವಲಿಂಗಪ್ಪ ನಾಯ್ಕೋಡಿ ಉದ್ಘಾಟಿಸುವರು. ಬಿಇಓ ಶಾಂತಪ್ಪ ಹುಲಕಲ್ ಉಪಸ್ಥಿತರಿರುವರು. ಮೆರವಣಿಗೆಯು ಸಂತ ಸೇವಾಲಾಲ್ ಚೌಕದಿಂದ ಸರ್ದಾರ್ ಶರಣಗೌಡ ವೃತ್ತದವರೆಗೆ ಸಾಗಿ ಸಮ್ಮೇಳನದ ಮುಖ್ಯ ವೇದಿಕೆ ತಲುಪುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.
ಕಲಬುರ್ಗಿಯ ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ ಕಾರ್ಯಕ್ರಮ ಉದ್ಘಾಟಿಸುವರು. ಸೊನ್ನದ ಡಾ. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅನೇಕ ಹರ ಗುರು ಚರಮೂರ್ತಿಗಳು, ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ಮಾಜಿ ಶಾಸಕ ದೊಡಪ್ಪಗೌಡ ಪಾಟೀಲ, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ, ಜಿ.ಪಂ ಸದಸ್ಯ ದಂಡಪ್ಪ ಸಾಹು ಸೇರಿದಂತೆ ಜನಪ್ರತಿನಿಧಗಳು, ಅಧಿಕಾರಿಗಳು ಭಾಗವಹಿಸುವರು. ನಾಟಕ ಕೃತಿ, ಕ್ಯಾಲೆಂಡರ್ ಬಿಡುಗಡೆ ಮತ್ತು ವಸ್ತು ಪ್ರದರ್ಶನ ನಡೆಯಲಿದೆ.
ಸಮ್ಮೇಳನಾಧ್ಯಕ್ಷರ ಬದುಕು–ಬರಹದ ಕುರಿತು ಸಾಹಿತಿ ಮಹಿಪಾಲರಡ್ಡಿ ಮುನ್ನೂರ ಮಾತನಾಡುವರು. ಸಮ್ಮೇಳನದಲ್ಲಿ ಎರಡು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಯಡ್ರಾಮಿ ಪರಿಸರದ ಜಾನಪದ ಸಂಸ್ಕೃತಿಯ ಬಗ್ಗೆ ಹಿರಿಯ ಪ್ರಾಧ್ಯಾಪಕರು ಮಾತನಾಡುವರು.
ಇದೇ ಸಂದರ್ಭದಲ್ಲಿ ನಾಡಿನ ಅನೇಕ ಸಾಧಕರನ್ನು ಪರಿಷತ್ನಿಂದ ಸತ್ಕರಿಸಲಾಗುವುದು. ಸ್ಥಳೀಯ ಕಲಾವಿದರಿಂದ ಸಂಜೆ ‘ಜಾನಪದ ಸಂಭ್ರಮ’ ನಡೆಯುವುದು ಎಂದು ನಾಗಪ್ಪ ಎಂ.ಸಜ್ಜನ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಸವರಾಜ ಬೋರಗಿ, ಪಿಡಿಓ ಬಾಬುಗೌಡ ಕುಳಗೇರಾ, ಪ್ರಶಾಂತ ಕುನ್ನೂರ, ಬಸವರಾಜ ಅರಕೇರಿ, ಪ್ರಕಾಶ ಸಾಹು, ಸಾಹೇಬಗೌಡ ದೇಸಾಯಿ, ಆರ್.ಜಿ.ಪುರಾಣಿಕ, ಸಿದ್ಧನಗೌಡ ಮಾಲೀಪಾಟೀಲ, ಜಿ.ಡಿ. ಪತ್ತಾರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.