ಕಲಬುರಗಿ: ವಿಧಾನಪರಿಷತ್ ಮಾಜಿ ಸದಸ್ಯ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಾಪಿಸಿದ ನಗರದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾರುತಿರಾವ್ ಡಿ. ಮಾಲೆ (84) ಅವರು ಮಂಗಳವಾರ ಇಲ್ಲಿನ ಶಾಂತಿನಗರದ ತಮ್ಮ ಮನೆಯಲ್ಲಿ ನಿಧನರಾದರು.
ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ದಲಿತ ನಾಯಕ ಬಿ. ಶಾಮಸುಂದರ ಅವರ ಪ್ರಭಾವಕ್ಕೊಳಗಾಗಿ ಹಾಸ್ಟೆಲ್ ವಾರ್ಡನ್ ಹುದ್ದೆಗೆ ತಿಲಾಂಜಲಿ ನೀಡಿದ ಮಾರುತಿರಾವ್ ಅವರು 1968ರಲ್ಲಿ ದಲಿತ ಚಳವಳಿಗೆ ಧುಮುಕಿ ಭೀಮಸೇನೆಯ ಖಜಾಂಚಿಯಾಗಿ ಕೆಲಸ ಮಾಡಿದ್ದರು. ಮೂಲತಃ ಬೀದರ್ ಜಿಲ್ಲೆಯ ಘಾಟಬೋರಾಳ ಗ್ರಾಮದ ಮಾಲೆ ಅವರು ಹೈದರಾಬಾದ್ ನಿಜಾಮನ ಖಾಸಗಿ ಸೈನ್ಯ ರಜಾಕಾರರ ವಿರುದ್ಧ ಹೋರಾಡಿದ್ದರು.
ತುಮಕೂರಿನ ಸಿದ್ಧಾರ್ಥ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ 20 ವರ್ಷ ಕಾರ್ಯನಿರ್ವಹಿಸಿದ್ದ ಮಾಲೆ ಅವರು ಕಲಬುರಗಿಯ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಸಮಿತಿ ಕಾರ್ಯದರ್ಶಿಯಾಗಿದ್ದರು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಪ್ರತಿಮೆ ಅನಾವರಣಗೊಳಿಸಿದ್ದರು.
ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಸಂಜೆ 4ಕ್ಕೆ ಕಲಬುರಗಿ ಹೊರವಲಯದ ಹಡಗಿಲ್ ಹಾರುತಿ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ.