ಚಿಂಚೋಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಇದರಿಂದ ಮುಂಗಾರು ಚಟುವಟಿಕೆಗಳು ಬಿರುಸು ಪಡೆಯುವಂತಾಗಿದೆ.
ಮೃಗಶಿರಾ(ಮಿರುಗಾ) ಮಳೆ ಪ್ರಾರಂಭವಾದ ಮೇಲೆ ಮಳೆಯ ಕೊರತೆ ಎದುರಾಗಿತ್ತು ಆದರೆ ಮೃಗಶಿರಾ ಮಳೆಯ ಎರಡನೇ ಚರಣದಲ್ಲಿ ಉತ್ತಮ ಮಳೆ ಸುರಿಯುವ ಮೂಲಕ ಮುಂಗಾರು ಬಿತ್ತನೆ ನಡೆಸಿದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಗುಡುಗು ಮಿಂಚಿನೊಂದಿಗೆ ಸುರಿದ ಜೋರು ಮಳೆಯಿಂದ ಚಿಂಚೋಳಿ, ಚಂದಾಪುರ, ಸುಲೇಪೇಟ, ಚಿಮ್ಮನಚೋಡ, ಐನಾಪುರ, ಚಂದನಕೇರಾ, ಯಲಕಪಳ್ಳಿ, ಐನೋಳ್ಳಿ, ನರನಾಳ ಮೊದಲಾದ ಕಡೆಗಳಲ್ಲಿ ಜೋರು ಮಳೆ ಸುರಿದು ಚರಂಡಿಗಳು ತುಂಬಿ ಹರಿದವು.
ರೈತರ ಹೊಲದಲ್ಲಿ ಉಳುಮೆ ಮಾಡಿದ ಸಾಲುಗಳಲ್ಲಿ ನೀರು ಹರಿದು ಹದವಾದ ಮಳೆಯಿಂದ ವರುಣದೇವ ಭೂಮಿಯನ್ನು ತಣಿಸಿದನು.
ತಾಲ್ಲೂಕಿನ ಮರಪಳ್ಳಿ, ಗಡಿಕೇಶ್ವಾರ, ರಾಯಕೋಡ, ಪೋಲಕಪಳ್ಳಿ, ಚಿಮ್ಮಾಈದಲಾಯಿ, ಅಣವಾರ, ಕನಕಪುರ, ಗಂಗನಪಳ್ಳಿ, ಗಾರಂಪಳ್ಳಿ, ಗೌಡನಹಳ್ಳಿ ದೇಗಲಮಡಿ, ಖುದಾವಂದಪುರ, ತುಮಕುಂಟಾ ಸೇರಿದಂತೆ ಹಲವಾರು ಕಡೆ ಉತ್ತಮ ಮಳೆಯಾಗಿದೆ.
ಬೀಜ ಗೊಬ್ಬರ ಸಂಗ್ರಹಿಸಿಕೊಂಡ ರೈತರು ಬಿತ್ತನೆಗೆ ಅಣಿಯಾಗುತ್ತಿರುವ ಹೊತ್ತಲ್ಲಿ ಸುರಿದ ಮಳೆ ರೈತರಿಗೆ ಸಂತಸ ತಂದರೆ, ಈಗಾಗಲೇ ಬಿತ್ತನೆ ನಡೆಸಿದ ರೈತರಿಗೆ ಬಂಪರ್ ಖುಷಿ ಉಂಟು ಮಾಡಿದೆ.
ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಉಲ್ಲಾಸಗೊಂಡಿದ್ದ ರೈತರು ಬಿತ್ತನೆಯಲ್ಲಿ ತೊಡಗಿದ್ದರು ಈಗ ಸುರಿದ ಮೃಗಶಿರಾ ಮಳೆ ಮುಂಗಾರು ಹಂಗಾಮಿಗೆ ವರವಾಗಿ ಪರಿಣಮಿಸಿದೆ.