ಕಮಲಾಪುರ: ಉಪಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಮಗ್ನವಾಗಿರುವ ಬಿಜೆಪಿ ರಾಜ್ಯ ಸರ್ಕಾರವು ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನ ತತ್ತರಿಸಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ತುಟಿ ಬಿಚ್ಚಿಲ್ಲ. ಶ್ರೀಚಂದ, ಜವಳಗಾ ಸೇತುವೆಗಳು ಪೂರ್ತಿ ಕೊಚ್ಚಿಕೊಂಡು ಹೋಗಿದ್ದು ಸಂಚಾರ ಸ್ಥಗಿತಗೊಂಡಿದೆ ಎಂದರು.
ಮನೆ ಮತ್ತು ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಸರ್ಕಾರ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು. ಒಂದು ವೇಳೆ ವಿಳಂಬ ಮಾಡಿದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ರೈತರ ಹೊಲಗಳು ಕೊಚ್ಚಿಕೊಂಡು ಹೋಗಿ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಶೀಘ್ರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಎಂದರು.
ಬೆಣ್ಣೆತೊರೆ ಪ್ರವಾಹದಿಂದ ಕುರಿಕೋಟಾ, ನಾಗೂರ ಗ್ರಾಮಗಳಲ್ಲಿ ನೀರು ಹೊಕ್ಕಿದೆ. ಕೂಡಲೇ ಹಕ್ಕು ಪತ್ರ ಒದಗಿಸಬೇಕು. ಹಾನಿಯಾದ ಸೇತುವೆ, ರಸ್ತೆ ದುರಸ್ತಿ ಮಾಡಬೇಕು ಎಂದು ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ ಹಾಗೂ ಪಂಚಾಯತ ರಾಜ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ವಿಜಯಕುಮಾರ ಜಿ.ಆರ್, ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಪಾಟೀಲ, ಶರಣಬಸಪ್ಪ ಜಾಗರಗಿ, ಸುಭಾಷ ಕೋರೆ, ಪ್ರಭು ಹೀರಾ, ಸನಿಜಪ್ಪ ಕಾಂಬಳೆ ಇದ್ದರು.