ಕಮಲಾಪುರ: ತಾಲ್ಲೂಕಿನ ಸೊಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಣ್ಣಿ ಸರಫೋಸ ಬಳಿಯ ಸೋನಾರ ತಾಂಡಾಕ್ಕೆ ಸೋಮವಾರ ತಾಲ್ಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಜಗನ್ನಾಥ ರೆಡ್ಡಿ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿತು. ಏಪ್ರಿಲ್ 24ರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
‘ಸೋನಾರ ತಾಂಡಾದಲ್ಲಿ ಸ್ಮಶಾನ ಮೌನ’ – ಕೆಲಸ ಅರಸಿ ಗುಳೆ ಹೋದ ಕಾರ್ಮಿಕರು: ಕೈ ಹಿಡಿಯದ ಉದ್ಯೋಗ ಖಾತ್ರಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಸೋಮವಾರ ಬೆಳಿಗ್ಗೆ ತಾಂಡಾಕ್ಕೆ ದೌಡಾಯಿಸಿ ಅಲ್ಲಿನ ನಿವಾಸಿಗಳಿಂದ ಮಾಹಿತಿ ಪಡೆದರು. ತಾಂಡಾದಲ್ಲಿ ಒಟ್ಟು 28 ಕಾರ್ಮಿಕರ ಜಾಬ್ ಕಾರ್ಡ್ಗಳಿದ್ದು, 21 ಜನರ ಜಾಬ್ ಕಾರ್ಡ್ಗಳು ಮಾತ್ರ ಚಾಲ್ತಿಯಲ್ಲಿವೆ. ಏ.23ರಂದು ಎನ್ಎಂಆರ್ ತೆಗೆದು 24ರಿಂದ ಕೆಲಸ ಒದಗಿಸಲಾಗುವುದು. ನೀರಿನ ಸಮಸ್ಯೆ ಬಗಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಶರಣಬಸಪ್ಪ ತಿಳಿಸಿದರು.
ಸೊಂತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ, ಗ್ರಾಮ ಪಂಚಾಯಿತಿ ತಾಂತ್ರಿಕ ಸಹಾಯಕ ಶಶಿಧರ, ಐಇಸಿ ಸಂಯೋಜಕ ಗಿರೀಶ ಇಂಡಿ, ಗ್ರಾಮ ಲೆಕ್ಕಾಧಿಕಾರಿ ಸುನೀಲ ಮಾಟೂರ, ತಾಂಡಾ ಮುಖಂಡ ವಿಠಲ್ ಸುನಾರ, ಸೋನಾಬಾಯಿ ಸುನರ ಮತ್ತಿತರರು ಉಪಸ್ಥಿತರಿದ್ದರು.