ಶುಕ್ರವಾರ, ಮಾರ್ಚ್ 31, 2023
26 °C

ಹೆಸರು ಸೂಚಿಸಿದ್ದೇವೆ, ಪಟ್ಟಾಭಿಷೇಕ ಮಾಡಿಲ್ಲ: ಚಂದ್ರಗುಂಡ ಶಿವಾಚಾರ್ಯಯರ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಾಳಗಿಯ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು 5 ವರ್ಷದ ಬಾಲಕ ನೀಲಕಂಠನ ಹೆಸರು ಸೂಚಿಸಿದ್ದೇವೆಯೇ ಹೊರತು ಪಟ್ಟಾಭಿಷೇಕ ಮಾಡಿಲ್ಲ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯಯರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರು ಲಿಂಗೈಕ್ಯರಾಗಿದ್ದರಿಂದ ಅವರ ಸ್ಥಾನವನ್ನು ಖಾಲಿ ಬಿಡಬಾರದು ಎಂಬ ಉದ್ದೇಶದಿಂದ ಉತ್ತರಾಧಿಕಾರಿ ಹೆಸರು ಸೂಚಿಸಿದ್ದೇವೆ. ಪೀಠಾಧಿಪತಿಗಳ ವಂಶದವರನ್ನೇ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಪರಂಪರೆಯಿದ್ದು, ಹೀಗಾಗಿ ಲಿಂಗೈಕ್ಯ ಶ್ರೀಗಳ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ ಅವರ ಮಗನ ಹೆಸರನ್ನು ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಎಳೆತನದಲ್ಲಿ ಸಂಸ್ಕಾರ ನೀಡುವುದು ಸೂಕ್ತ ಹಾಗೂ ಸುಲಭ ಎಂಬ ಕಾರಣಕ್ಕಾಗಿ ಪಂಚಶಿವಾಚಾರ್ಯರ ಸಮ್ಮತಿ ಮೇರೆಗೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ನೇಮಕಗೊಂಡ ಉತ್ತರಾಧಿಕಾರಿಗಳಿಗೆಲ್ಲ ‍ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದರ್ಥವಲ್ಲ. ಅವರಿಗೆ ವೈದಿಕ ಸಂಸ್ಕೃತಿ ಹಾಗೂ ಸಂಸ್ಕಾರ ನೀಡಿ ಯೋಗ್ಯ ಸನ್ಯಾಸಿಯಾಗಿ ತಯಾರು ಮಾಡಿದ ನಂತರ ಶಿವಾಚಾರ್ಯರಿಗೆ ಇರುವ ಎಲ್ಲ ಅರ್ಹತೆಗಳು ಇರುವುದನ್ನು ಖಚಿತಪಡಿಸಿಕೊಂಡ ಮೇಲೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದರು.

‘5 ವರ್ಷದ ಬಾಲಕನಿಗೆ ಪಟ್ಟಾಭಿಷೇಕ’ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಅಲ್ಲದೆ ಉತ್ತರಾಧಿಕಾರಿಗೆ ನೀಲಕಂಠ ಶಿವಾಚಾರ್ಯರು ಎಂಬ ಪದಪ್ರಯೋಗ ಮಾಡಲಾಗುತ್ತಿದೆ. ಇದು ಸರಿಯಲ್ಲ. ಭಕ್ತರು ಇಂಥ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೋರಿದರು.

ಶಾಂತಸೋಮನಾಥ ಶಿವಾಚಾರ್ಯರು, ಪ್ರಶಾಂತ ದೇವರು, ಮುಖಂಡರಾದ ಶಿವಶರಣಪ್ಪ ಕಮಲಾಪುರ ಹಾಗೂ ಶರಣಗೌಡ ಪೊಲೀಸ್ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು